ನವದೆಹಲಿ : ದೆಹಲಿ ಹೈಕೋರ್ಟ್ ಆದೇಶ ಹಿನ್ನಲೆಯಲ್ಲಿ ಹರ್ಯಾಣಾ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಜೈಲಾಧಿಕಾರಿಗಳ ಮುಂದೆ ಶರಣಾಗತರಾಗಿದ್ದಾರೆ.
ಜಾಮೀನು ದುರ್ಬಳಕೆ ಮಾಡಿಕೊಂಡ ಹಿನ್ನಲೆಯಲ್ಲಿ ದೆಹಲಿ ಹೈಕೋರ್ಟ್ ಓಂ ಪ್ರಕಾಶ್ ಚೌಟಾಲಾ ಅವರಿಗೆ ಒಂದುದಿನದೊಳಗೆ ಜೈಲಧಿಕಾರಿಗಳ ಎದುರು ಶರಣಾಗತರಗುವಂತೆ ಅ.10ರಂದು ಸೂಚನೆ ನೀಡಿತ್ತು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಪೊಲೀಸರಿಗೆ ಶರಣಾಗಿರುವ ಚೌಟಾಲಾ ಮತ್ತೆ ಜೈಲುಶಿಕ್ಷೆಗೆ ಗುರಿಯಾಗಿದ್ದಾರೆ.
ಈ ವೇಳೆ ಮಾತನಾಡಿರುವ ಚೌಟಾಲಾ, ಬಿಜೆಪಿ ಸಿಬಿಐನ್ನು ದುರುಪಯೋಗಮಾಡಿಕೊಳ್ಳುತ್ತಿದ್ದು, ನನ್ನ ವಿರುದ್ಧ ತಂತ್ರ ರೂಪಿಸಿದೆ ಎಂದು ಆರೋಪ ಮಾಡಿದ್ದಾರೆ.
ಐ.ಎನ್.ಎಲ್ ಮುಖ್ಯಸ್ಥರಾಗಿರುವ ಚೌಟಾಲಾ ಶಿಕ್ಷಕರ ನೇಮಕಾತಿ ಹಗರಣದಲ್ಲಿ 10 ವರ್ಷ ಜೈಲುಶಿಕ್ಷೆಗೆ ಗುರಿಯಾಗಿದ್ದರು. ಆದರೆ ಅನಾರೋಗ್ಯ ನೆಪವೊಡ್ಡಿ ಜಾಮೀನಿನ ಮೇಲೆ ಹೊರ ಬಂದ ಅವರು, ಹರ್ಯಾಣ ವಿಧಾನಸಭಾ ಚುನಾವಣೆಗೆ ಪ್ರಚಾರದಲ್ಲಿ ನಿರತರಾಗಿದ್ದರು. ಈ ಹಿನ್ನಲೆಯಲ್ಲಿ ಚೌಟಾಲಾ ಜಾಮೀನು ರದ್ದುಗೊಳಿಸುವಂತೆ ಕೋರಿ ಸಿಬಿಐ ಅರ್ಜಿ ಸಲ್ಲಿಸಿತ್ತು.
ಈ ಹಿನ್ನಲೆಯಲ್ಲಿ ದೆಹಲಿ ಹೈಕೋರ್ಟ್ ಚೌಟಾಲಾ ಅವರಿಗೆ ಒಂದು ದಿನದೊಳಗೆ ಜೈಲಧಿಕಾರಿ ಎದುರು ಶರಣಾಗುವಂತೆ ತಾಕೀತುಮಾಡಿತ್ತು. ಅಲ್ಲದೇ ಶರಣಾಗತಿಗೆ ಅ.13ರವರೆಗೂ ಕಾಲವಕಾಶ ನೀಡುವಂತೆ ಚೌಟಾಲಾ ಕೋರಿದ್ದ ಮನವಿಯನ್ನು ತಿರಸ್ಕರಿಸಿದ್ದ ನ್ಯಾಯಾಲಯ, ಚಿಕಿತ್ಸೆ ಅಗತ್ಯವಿದ್ದರೆ ಜೈಲಿನ ಅಧಿಕಾರಿಗಳು ಏಮ್ಸ್ ಆಸ್ಪತ್ರೆಗೆ ಕರೆದೊಯ್ಯುತ್ತಾರೆ ಎಂದು ತಿಳಿಸಿತ್ತು.