ಲಖ್ನೌ : 'ಸಮಾಜವಾದಿ ಪಕ್ಷ'(ಎಸ್.ಪಿ)ದ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಜೆಡಿಯು ರಾಷ್ಟ್ರಾಧ್ಯಕ್ಷ ಶರದ್ ಯಾದವ್ ಅಚ್ಚರಿ ಮೂಡಿಸಿದ್ದಾರೆ.
ಅ.8ರಂದು ಉದ್ಘಾಟನೆಗೊಂಡ ಸಮಾಜವಾದಿ ಪಕ್ಷದ ರಾಷ್ಟ್ರೀಯ ಸಮ್ಮೇಳನದಲ್ಲಿ ಎಸ್.ಪಿ ಪರಮೋಚ್ಛ ನಾಯಕ ಮುಲಾಯಂ ಸಿಂಗ್ ಯಾದವ್ ಅವರೊಂದಿಗೆ ಜೆಡಿಯು ಅಧ್ಯಕ್ಷ ಶರದ್ ಯಾದವ್ ವೇದಿಕೆ ಹಂಚಿಕೊಂಡಿದ್ದಾರೆ. ಈ ಬೆಳವಣಿಗೆ ಆಧಾರದಲ್ಲಿ ಶರದ್ ಯಾದವ್ ಸಮಾಜವಾದಿ ಪಕ್ಷದೊಂದಿಗೆ ಕೈಜೋಡಿಸುವ ಸಾಧ್ಯವಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಮಾಜವಾದಿ ಪಕ್ಷದ ಸಮ್ಮೇಳನದಲ್ಲಿ ಭಾಗವಹಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿರುವ ಶರದ್ ಯಾದವ್, ಮುಲಾಯಂ ಸಿಂಗ್ ಹಾಗೂ ನಾನು ಉತ್ತಮ ಸ್ನೇಹಿತರು, ಆಹ್ವಾನ ನೀಡಿದ್ದರ ಹಿನ್ನೆಲೆಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿದ್ದಾರೆ. ಹಲವು ವರ್ಷಗಳಿಂದ ಜೊತೆಗಿದ್ದೇವೆ, ದೇಶದ ಸಂವಿಧಾನಕ್ಕೆ ಪ್ರಸ್ತುತ ದಿನಗಳಲ್ಲಿ ತೀವ್ರ ಪೆಟ್ಟು ಬಿದ್ದಿದೆ, ನಮ್ಮ ದೇಶದ ಸಂವಿಧಾನವನ್ನು ಉಳಿಸಬೇಕಿದೆ ಎಂದು ಶರದ್ ಯಾದವ್ ಹೇಳಿದ್ದಾರೆ.
ಶರದ್ ಯಾದವ್ ಎಸ್.ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಿದ್ದರೂ ಇಂದಿನ ರಾಜಕೀಯ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಹಳೆ ಜನತಾ ಪರಿವಾರ ಒಗ್ಗೂಡಬೇಕೆಂದು ಕರೆ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಜೆಡಿಯು ಗೆ ತೀವ್ರ ಮುಖಭಂಗ ಉಂಟಾಗಿದ್ದ ಹಿನ್ನೆಲೆಯಲ್ಲಿ ಬದ್ಧ ವೈರಿ ಆರ್.ಜೆ.ಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರೊಂದಿಗೆ ಜೆಡಿಯು ಕೈಜೋಡಿಸಿದೆ. ಬಿಜೆಪಿ ಬಲಿಷ್ಠವಾಗುತ್ತಿರುವ ಬೆನ್ನಲ್ಲೇ ಜನತಾ ದಳದ ಪಳಯುಳಿಕೆಗಳು ಒಗ್ಗೂಡುವ ಸಾಹಸದಲ್ಲಿ ತೊಡಗಿವೆ.