ಸಿಕ್ಕಿಂ : ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಕೃಷಿಯಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಸಿಕ್ಕಿಂ ರಾಜ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಸಿಕ್ಕಿಂ ರಾಜ್ಯವನ್ನು ಮೊದಲ 'ಸಾವಯವ ರಾಜ್ಯ' ಎಂದು ಘೋಷಿಸಿದರು. ವಿಶ್ವಕ್ಕೆ ಇದ್ದೊಂದು ಮಾದರಿ ರಾಜ್ಯ ಎಂದೂ ಸಹ ಹೇಳಿದರು.
ಸಿಕ್ಕಿಂನ ಗ್ಯಾಂಗ್ಟಕ್ ನಲ್ಲಿ ಕೃಷಿ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಭಾರತದಲ್ಲಿ ಕೃಷಿ ಕ್ರಾಂತಿ ತರುವ ಕುರಿತು ಮಾತನಾಡಿದರು.
ನಾನು ಎಲ್ಲಾ ರಾಜ್ಯಗಳ ಕೃಷಿ ಸಚಿವರ ಜೊತೆ ಇಲ್ಲಿ ಇದ್ದೇನೆ. ಭಾರತದಲ್ಲಿ ಕೃಷಿಯಲ್ಲಿ ಹೇಗೆ ಬದಲಾವಣೆ ತರಬಹುದೆಂದು ಚರ್ಚೆ ನಡೆಸಲು ನಾವೆಲ್ಲಾ ಸೇರಿದ್ದೇವೆ. ಮೊದಲ ಬಾರಿಗೆ ಆಳವಾದ ಚರ್ಚೆ ನಡೆಯಿತು. ಅವರೆಲ್ಲ ಕ್ರಿಯಾತ್ಮಕ ಅಂಷ ಮತ್ತು ಸಲಹೆಗಳನ್ನು ತೆಗೆದುಕೊಂಡಿದ್ದಾರೆ. ಕೃಷಿಯಲ್ಲಿ ಬದಲಾವಣೆ ತರಲು ಪ್ರಯತ್ನ ಪಡಲು ಸಾಧ್ಯವಿರುವ ಕೆಲವು ರಾಜ್ಯಗಳಿಗೆ ಕೆಲಸ ಪ್ರಾರಂಭಿಸಲು ಹೇಳಲಾಗಿದೆ ಎಂದು ಪ್ರಧಾನಿ ಹೇಳಿದರು.
ದಶಕಗಳ ಮೊದಲು ಸಾವಯವ ಕೃಷಿಯ ಬಗ್ಗೆ ಮಾತನಾಡಿದಾಗ ಜನರು ಖಂಡಿತ ವಿರೋಧಿಸಿರುತ್ತಾರೆ. ಆದರೆ ಇಂದು ನಾವು ಅವರ ನಿರಂತರ ಶ್ರಮದ ಪರಿಣಾಮವನ್ನು ನೋಡುತ್ತಿದ್ದೇವೆ ಎಂದು ಸಿಕ್ಕಿಂ ಜನರ ಶ್ರಮವನ್ನು ಶ್ಲಾಘಿಸಿದರು.
ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಎಲ್ಲಾ ದೇಶಗಳು ಒಪ್ಪಿವೆ. ನಾವು ಪ್ರಕೃತಿಯನ್ನು ದುರ್ಬಳಕೆ ಮಾಡಬಾರದು. ನಾವು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಬೇಕು ಮತ್ತು ಮೂಲಭೂತ ಜೀವನ ಶೈಲಿಯನ್ನು ಅನುಸರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದರು.
ಎರಡು ದಿನದ ಈಶಾನ್ಯ ಭಾರತದ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಮಂಗಳವಾರ ಅಸ್ಸಾಂನ ಯುವಕರೊಂದಿಗೆ ಚರ್ಚೆ ನಡೆಸಲಿದ್ದಾರೆ.