ಬೆಂಗಳೂರು : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಜಾಮೀನು ಅರ್ಜಿ ವಜಾಗೊಳಿಸಿ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಜಯಲಲಿತಾಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲುವಾಸ ಮುಂದರಿಕೆ.
ಅಕ್ರಮ ಆಸ್ತಿಗಳಿಕೆ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಕಳೆದ 11 ದಿನಗಳಿಂದ ಜೈಲುವಾಸ ಅನುಭವಿಸುತ್ತಿರುವ ಜಯಲಲಿತಾ ಸೇರಿದಂತೆ ನಾಲ್ವರು ಅಪರಾಧಿಗಳಿಗೆ ಜಾಮೀನು ನೀಡಲು ನಿರಾಕರಿಸಿರುವ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್, ಇದೊಂದು ಗಂಭೀರವಾದ ಅಪರಾಧವಾಗಿದ್ದು, ಜಾಮೀನು ನೀಡಲು ಹಾಗೂ ವಿಶೇಷ ನ್ಯಾಯಾಲಯದ ತೀರ್ಪು ಅಮಾನತು ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಮಂಗಳವಾರ ಬೆಳಿಗ್ಗೆಯಿಂದ ಜಯಲಲಿತಾ ಮೇಲ್ಮನವಿ ಅರ್ಜಿ ವಿಚಾರಣೆ ನಡೆಯುತ್ತಿದ್ದು, ಜಯಲಲಿತಾ ಅವರಿಗೆ ಜಾಮೀನು ನೀಡುವಂತೆ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಮನವಿ ಮಾಡಿದ್ದರು.
ಜಯಲಲಿತಾ ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 18 ವರ್ಷಗಳಿಂದ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಮೇಲ್ಮನವಿ ಅರ್ಜಿ ವಿಚಾರಣೆ ಶೀಘ್ರದಲ್ಲಿ ನಡೆಯಲು ಸಾಧ್ಯವಿಲ್ಲ. ವಿಚಾರಣೆ ವಿಳಂಬವಾಗುವುದರಿಂದ ಜಯಲಲಿತಾ ಅವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಅಲ್ಲದೇ ಮೇಲ್ಮನವಿ ಅರ್ಜಿ ಶೀಘ್ರ ವಿಚಾರಣೆಯಾಗಬೇಕು. ಇಲ್ಲವಾದಲ್ಲಿ ಅಪರಾಧಿಯನ್ನು ಜೈಲಿನಲ್ಲಿಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಬಗ್ಗೆ ಕಾನೂನುನಿನಲ್ಲಿಯೂ ಸ್ಪಷ್ಟನೆಯಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪಿನ ಹಲವು ಹೇಳಿಕೆಗಳನ್ನು ರಾಮ್ ಜೇಠ್ಮಲಾನಿ ನ್ಯಾಯಾಲಯದಲ್ಲಿ ಉಲ್ಲೇಖ ಮಾಡಿದ್ದಾರೆ.
ನನ್ನ ಕಕ್ಷೀದಾರರು ನಿರಪರಾಧಿ ಎಂಬ ವಿಶ್ವಾಸವಿದೆ. ಜಯಲಲಿತಾ ಅವರಿಗೆ ಜಾಮೀನು ನೀಡಿದರೆ ನಾಪತ್ತೆಯಾಗುವುದಿಲ್ಲ, ವಿಚಾರಣೆಗೆ ಯಾವುದೇ ತೊಂದರೆಯೂ ಆಗುವುದಿಲ್ಲ, ಹೀಗಾಗಿ ಜಾಮೀನು ಮಂಜೂರು ಮಾಡುವಂತೆ ವಾದ ಮಂಡಿಸಿದರು.
ವಿಶೇಷ ಕೋರ್ಟ್ ನಿಂದ ಜಯಲಲಿತಾ ವಿರುದ್ಧದ ಸಾಕ್ಷಿದಾರರ ವಿಶ್ಲೇಷಣೆಯಾಗಿದೆ. 1971ರಲ್ಲಿ ಜಯಲಲಿತಾ ಪಿತ್ರಾರ್ಜಿತವಾಗಿ ಒಡವೆ ಹಾಗೂ ಆಸ್ತಿಯನ್ನು ಪಡೆದುಕೊಂಡಿದ್ದಾರೆ. ಇದನ್ನು ವಿಶೇಷ ನ್ಯಾಯಾಲಯ ಪರಿಗಣಿಸಿಲ್ಲ. ಅಲ್ಲದೇ ಜಯಲಲಿತಾ ಮನೆ ನಿರ್ಮಾಣದ ವಿಚಾರದ ಬಗ್ಗೆಯೂ ನ್ಯಾಯಾಲಯ ಸೂಕ್ತವಾಗಿ ನಡೆದುಕೊಂಡಿಲ್ಲ, ಪೊಲೀಸರು ಹೇಳಿದ್ದನ್ನು ಮಾತ್ರ ಒಪ್ಪಿಕೊಂಡಿದ್ದು, ಈ ಬಗ್ಗೆ ಪರಿಶೀಲನೆಯನ್ನೂ ನಡೆಸಿಲ್ಲ, ಸಾಕ್ಷಾಧಾರ ಕಾಯ್ದೆಯಂತೆ ವಿಶೇಷ ಕೋರ್ಟ್ ನಡೆದುಕೊಂಡಿಲ್ಲ ಮಾತ್ರವಲ್ಲ ಜಯಲಲಿತಾ ಸೂಕ್ತ ಸಮಯದಲ್ಲಿ ಸಮರ್ಪಕವಾಗಿ ಆದಾಯ ತೆರಿಗೆ ಪಾವತಿಸಿದ್ದಾರೆ, ಆದರೆ ಈ ಬಗ್ಗೆ ನ್ಯಾಯಾಲಯ ಯಾವುದೇ ಪರಿಶೀಲನೆ ನಡೆಸಿಲ್ಲ ಎಂದು ವಾದ ಮಂಡಿಸಿದರು.
ಈ ವೇಳೆ ರಾಮ್ ಜೇಠ್ಮಲಾನಿ ವಾದದ ಬಗ್ಗೆ ಆಕ್ಷೇಪವಿದೆಯೇ ಎಂದು ನ್ಯಾ.ಎ.ವಿ.ಚಂದ್ರಶೇಖರ್ ಕೇಳಿದಾಗ, ಜಯಲಲಿತಾ ಅವರಿಗೆ ಷರತ್ತು ಬದ್ಧ ಜಾಮೀನು ನೀಡಲು ನಮ್ಮ ಅಭ್ಯಂತರವಿಲ್ಲ ಎಂದು ಸರ್ಕಾರಿ ಪರ ವಕೀಲ ಭವಾನಿ ಸಿಂಗ್ ಹೈಕೋರ್ಟ್ ಗೆ ತಿಳಿಸಿದರು.
ಉಭಯ ವಕೀಲರ ವಾದ-ವಿವಾದ ಆಲಿಸಿದ ನ್ಯಾ.ಎ.ವಿ.ಚಂದ್ರಶೇಖರ್ ಜಯಲಲಿತ ಹಾಗೂ ಇತರ ಮೂವರು ಅಪರಾಧಿಗಳಿಗೂ ಷರತ್ತು ಬದ್ಧ ಜಾಮೀನು ನೀಡಲು ಅಭ್ಯಂತರವಿಲ್ಲ ಎಂದು ಸರ್ಕಾರಿ ಪರ ವಕೀಲರು ಹೇಳಿಕೆ ನೀಡಿದ್ದರೂ ಇದೊಂದು ಭ್ರಷ್ಟಾಚಾರ ಪ್ರಕರಣವಾದ್ದರಿಂದ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿ ಮೇಲ್ಮನವಿ ಅರ್ಜಿ ವಜಾಗೊಳಿಸಿದರು.
ಅಲ್ಲದೇ, ನಿಮಗೆ ಜಾಮೀನು ಬೇಕೆಂದಾದರೆ ಸುಪ್ರೀಂಕೋರ್ಟ್ ಗೆ ಮೊರೆ ಹೋಗಬಹುದು ಎಂದು ಸ್ಪಷ್ಟಪಡಿಸಿದರು. ಈ ಹಿನ್ನಲೆಯಲ್ಲಿ ಜಯಲಲಿತಾಗೆ ಮತ್ತೆ ಜೈಲುವಾಸವೇ ಮುಂದುವರೆಯಲಿದೆ.
ಅಕ್ರಮ ಆಸ್ತಿಗಳಿಕೆ ಪ್ರಕರಣ ಸಾಬೀತಾದ ಹಿನ್ನಲೆಯಲ್ಲಿ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಜಯಲಲಿತಾ ಸೇರಿದಂತೆ ನಾಲ್ವರು ಅಪರಾಧಿಗಳಿಗೆ ನಾಲ್ಕು ವರ್ಷ ಜೈಲುಶಿಕ್ಷೆ ಹಾಗೂ 100 ಕೋಟಿ ರೂ. ದಂಡ ವಿಧಿಸಿ ಆದೇಶ ಹೊರಡಿಸಿತ್ತು.