BW News Bureau : ಕಳೆದ ಎರಡು ದಿನಗಳಿಂದ ನಗರದಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಯಾಗದಿರುವ ಹಿನ್ನಲೆಯಲ್ಲಿ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ಮೇಯರ್ ಶಾಂತಕುಮಾರಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಳಿಗ್ಗೆ ಕೆ.ಆರ್.ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮೇಯರ್, ಎಲ್ಲೆಲ್ಲೂ ಕಸದ ರಾಶಿಯೇ ಕಂಡು ಬಂದಿದೆ. ಇದರಿಂದ ಆಕ್ರೋಶಗೊಂಡು, ಕಸ ನಿರ್ವಹಣೆಗಾಗಿ ಪ್ರತಿದಿನ ನಗರದಲ್ಲಿ 1ಲಕ್ಷ ರೂ ವೆಚ್ಚಮಾಡಲಾಗುತ್ತಿದೆ. ಆದಾಗ್ಯೂ ಕಳೆದ ಎರಡು ದಿನಗಳಿಂದ ನಗರದಲ್ಲಿ 300 ಟನ್ ಕಸ ಸಂಗ್ರಹಣೆಯಾಗಿದೆ. ಇಷ್ಟಾದರೂ ತ್ಯಾಜ್ಯ ವಿಲೇವಾರಿ ಮಾಡದೇ ಏನು ಮಾಡುತ್ತೀದ್ದೀರಾ ಎಂದು ಕಾರ್ಯಪಾಲಕ ಅಭಿಯಂತರ ರಂಗನಾಥ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಒಂದು ಗಂಟೆಯೊಳಗೆ ಮಾರುಕಟ್ಟೆ ಆವರಣ ಸ್ವಚ್ಛವಾಗಬೇಕು ಎಂದು ತಾಕೀತು ಮಾಡಿದರು. ಮೇಯರ್ ಶಾಂತಕುಮಾರಿ ಅವರ ಮಾತುಗಳಿಗೆ ತಬ್ಬಿಬ್ಬಾದ ಅಧಿಕಾರಿಗಳು ತ್ಯಾಜ್ಯವಿಲೇವಾರಿ ಮಾಡುವ ಭರವಸೆಯೊಂದಿಗೆ ಕಾರ್ಯಪ್ರವೃತ್ತರಾದರು.
ಇದೇ ವೇಳೆ ರಸಲ್ ಮಾರುಕಟ್ಟೆಗೆ ಮೇಯರ್ ಭೇಟಿ ನೀಡಿದಾಗಲೂ ಇದೇ ದೃಶ್ಯ ಸಾಮಾನ್ಯವಾಗಿತ್ತು. ಅಲ್ಲಿಯೂ ಅಧಿಕಾರಿಗಳಿಗೆ ಮೇಯರ್ ಬಿಸಿಮುಟ್ಟಿಸಿದರು.