ಬೆಂಗಳೂರು : ಜೆಡಿಎಸ್ ಕೋರ್ ಕಮಿಟಿ ಪಟ್ಟಿ ಬಹುತೇಕ ಸಿದ್ಧಗೊಂಡಿದ್ದು, 11-13 ನಾಯಕರ ಹೆಸರನ್ನು ಅಂತಿಮಗೊಳಿಸಲಾಗಿದೆ. ಅ.15ರ ವೇಳೆಗೆ ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆಯಿದೆ.
ಮಾಜಿ ಸಚಿವ ಎಂ.ಸಿ.ನಾಣಯ್ಯ, ಬಸವರಾಜ್ ಹೊರಟ್ಟಿ, ಚೆಲುವರಾಯಸ್ವಾಮಿ, ಬಂಡೆಪ್ಪ ಕಾಶಂಪುರ, ಲೀಲಾದೇವಿ ಆರ್.ಪ್ರಸಾದ್, ಶಾಸಕರಾದ ವೈ.ಎಸ್.ವಿ.ದತ್ತಾ, ಡಿ.ನಾಗರಾಜಯ್ಯ, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಕೆ.ಶ್ರೀನಿವಾಸ್ ಗೌಡ, ಸತ್ಯನಾರಾಯಣ ಮೊದಲಾದವರ ಹೆಸರು ಬಹುತೇಕ ಅಂತಿಮಗೊಂಡಿದೆ.
ಉಳಿದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕೋರ್ ಕಮಿಟಿ ಸದಸ್ಯರಾಗಿರಲಿದ್ದಾರೆ. ಆದರೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೆ ಕೋರ್ ಕಮಿಟಿಯಲ್ಲಿ ಸ್ಥಾನ ಸಿಗಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಪಕ್ಷದಲ್ಲಿ ಗುರುರುತಿಕೊಂಡಿರುವ ಹಿರಿಯ ಮುಖಂಡರು ಹಾಗೂ ನಿಷ್ಠಾವಂತರಿಗೆ ಮಾತ್ರ ಕೋರ್ ಕಮಿಟಿಯಲ್ಲಿ ಸ್ಥಾನ ನೀಡಲಾಗಿದೆ. ಅಲ್ಲದೇ ಅಂತಿಮ ಕ್ಷಣಗಳಲ್ಲಿ ಕೆಲವು ಬದಲಾವಣೆಯಾಗುವ ಸಾಧ್ಯತೆಗಳಿವೆ.
ಈ ನಡುವೆ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಆರಂಭಗೊಂಡಿದ್ದ ಗ್ರಾಮ ವಾಸ್ತವ್ಯವನ್ನು ಕುಮಾರಸ್ವಾಮಿ ವಿಪಕ್ಷ ನಾಯಕನಾಗಿ ಮತ್ತೆ ಮುಂದುವರೆಸಲಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಮೀಣ ಭಾಗಗಳಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಸೆಳೆಯಲು ಹಾಗೂ ಈ ಮೂಲಕ ಪಂಚಾಯತ್ ಚುನಾವಣೆಗೆ ಪಕ್ಷ ಸಂಘಟಿಸಿ ಸಜ್ಜುಗೊಳಿಸುವುದು ಮತ್ತೊಂದು ಉದ್ದೇಶ ಎನ್ನಲಾಗಿದೆ. ಗ್ರಾಮ ವಾಸ್ತವ್ಯಕ್ಕೆ ಮೊದಲ ಹಂತದಲ್ಲಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳನ್ನು ಕುಮಾರಸ್ವಾಮಿ ಆಯ್ಕೆ ಮಾಡಿಕೊಂಡಿದ್ದು, ಬಳಿಕ ಹಳೆ ಮೈಸೂರು ಭಾಗದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.