ಮುಂಬೈ : ಬಿಜೆಪಿ-ಶಿವಸೇನೆ ನಡುವಣ ಸುದೀರ್ಘ 25 ವರ್ಷಗಳ ಮೈತ್ರಿ ಮುರಿಯಲು ಎನ್ ಸಿಪಿ ಮುಖಂಡ ಶರದ್ ಪವಾರ್ ಕಾರಣ ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಆರೋಪಿಸಿದ್ದಾರೆ.
ಪ್ಪಶ್ಚಿಮ ಮುಂಬೈನಲ್ಲಿ ಮಾತನಾಡಿದ ಅವರು, ಶಿವಸೇನೆಯೊಂದಿಗಿನ ಮೈತ್ರಿ ಮುರಿದರೆ ಎನ್ ಸಿಪಿ ಬೆಂಬಲ ನೀಡುತ್ತದೆ ಎಂದು ಶರದ್ ಪವಾರ್ ಹಿರಿಯ ಬಿಜೆಪಿ ನಾಯಕರೊಬ್ಬರಿಗೆ ಹೇಳಿದ್ದಾರೆ. ಈ ಸಂಭಾಷಣೆಯನ್ನು ತನ್ನ ನಂಬಿಕಸ್ತ ವ್ಯಕ್ತಿಯೊಬ್ಬರು ಕೇಳಿದ್ದಾರೆ ಅಲ್ಲದೇ ಪತ್ರಕರ್ತರೊಬ್ಬರು ಇದನ್ನು ತಮಗೆ ಖಚಿತಪಡಿಸಿದ್ದಾರೆ ಎಂದು ತಿಳಿಸಿದರು.
ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಮುರಿದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ರಾಜ್ಯದ ಅವ್ಯವಸ್ಥೆಗೆ ಬಿಜೆಪಿ,ಶಿವಸೇನೆ, ಕಾಂಗ್ರೆಸ್ ಹಾಗೂ ಎನ್ ಸಿಪಿ ಪಕ್ಷಗಳೇ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.
ನಮಗೆ ಅಧಿಕಾರ ನೀಡಿ ಅಭಿವೃದ್ಧಿ ಎಂದರೇನು ಎಂಬುದನ್ನು ನಾನು ತೋರಿಸುತ್ತೇನೆ ಎಂದಿರುವ ರಾಜ್ ಠಾಕ್ರೆ, ಪ್ರತಿಪಕ್ಷಗಳು ನಿಷ್ಕ್ರಿಯವಾಗಿರುವ ಕಾರಣ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದೆ ಎಂದು ಕಿಡಿಕಾರಿದ್ದಾರೆ.