ಬೆಂಗಳೂರು : ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಪ್ರಪ್ರಥಮ ಬಾರಿಗೆ ಸ್ಥಾಪಿಸಿರುವ ಮಹಾತ್ಮಗಾಂಧಿ ಸೇವಾ ಪ್ರಶಸ್ತಿಯನ್ನು ಮಧ್ಯಪ್ರದೇಶದಲ್ಲಿ ಚಂಬಲ್ ಕಣಿವೆಯ ಡಕಾಯಿತರ ಮನಪರಿವರ್ತನೆ ಮಾಡಿ ಮುಖ್ಯವಾಹಿನಿಗೆ ತಂದ ಹಿರಿಯ ಗಾಂಧೀವಾದಿ ಡಾ ಎಸ್. ಎನ್. ಸುಬ್ಬರಾವ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ, ಹಜ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಆರ್.ರೋಷನ್ ಬೇಗ್ ತಿಳಿಸಿದ್ದಾರೆ.
ಐದು ಲಕ್ಷ ರೂ ನಗದು ಒಳಗೊಂಡ ಈ ಪ್ರಶಸ್ತಿಯನ್ನು ಅಕ್ಟೋಬರ್ 2 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಪ್ರದಾನ ಮಾಡಲಿದ್ದಾರೆ ಎಂದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ ಹೊ.ಶ್ರೀನಿವಾಸಯ್ಯ, ಹಿರಿಯ ಪತ್ರಕರ್ತ ಜಿ. ಎನ್.ರಂಗನಾಥ ರಾವ್, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪ್ರೊ. ಎಜಾಜುದ್ದೀನ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಬಿ. ಟಿ.ಜಾಹ್ನವಿ, ವಾರ್ತಾ ಇಲಾಖೆಯ ನಿರ್ದೇಶಕರಾದ ಎನ್. ಆರ್. ವಿಶುಕುಮಾರ್, ಅವರನ್ನೊಳಗೊಂಡ ಸಮಿತಿ ಸುಬ್ಬರಾವ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ತಿಳಿಸಿದರು.
ಡಾ.ಎಸ್.ಎನ್ ಸುಬ್ಬರಾವ್ ಅವರು ಪಂಡಿತ್ ಜವಹರಲಾಲ್ ನೆಹರು,ಕೆ. ಕಾಮರಾಜ್ ಅವರೊಡನೆ ಸಕ್ರಿಯವಾಗಿ ಸ್ವಾತಂತ್ರ ಸಂಗ್ರಾಮದಲ್ಲಿ ಭಾಗವಹಿಸಿದ್ದರು. ಹಿರಿಯ ಸ್ವಾತಂತ್ರ ಹೋರಾಟಗಾರರಾದ ಡಾ.ಎನ್.ಎಸ್ ಹರ್ಡೀಕರ್ ಅವರ ಸಂಪರ್ಕಕ್ಕೆ ಸಹ ಬಂದಿದ್ದರು. ಜೀವನದಲ್ಲಿ ಗಾಂಧೀಜಿಯವರ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರು. ಚಂಬಲ್ ಕಣಿವೆಯಲ್ಲಿ 600ಕ್ಕೂ ಹೆಚ್ಚು ಡಕಾಯಿತರ ಮನಪರಿವರ್ತನೆಯಿಂದ ಜೀವನದ ಮುಖ್ಯವಾಹಿನಿಗೆ ತಂದ ಹರಿಕಾರರು. ಡಕಾಯಿತರ ಪುನರ್ವಸತಿಗೆಂದೇ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಚೌರಾದಲ್ಲಿ ಅವರು ಗಾಂಧಿ ಸೇವಾಶ್ರಮ ಸ್ಥಾಪಿಸಿದರು. ಗುಜರಾತ್ ಸೇರಿದಂತೆ ವಿಶ್ವದ ಹಲವಡೆ ಐಕ್ಯತೆ ಸಮಾವೇಶದಲ್ಲಿ ಭಾಗವಹಿಸಿದ್ದರು. ಇವರು ರಾಜೀವ್ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ, ಮಹಾತ್ಮ ಗಾಂಧಿ ಪುರಸ್ಕಾರ್ ಮುಂತಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದರು.
ಗಾಂಧಿಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಹಾತ್ಮಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ ಇದರ ಪ್ರದಾನ ಸಮಾರಂಭ ಹಾಗೂ ವಿಶೇಷ ಪ್ರಕಟಣೆಗಳ ಬಿಡುಗಡೆ, ’ ಕುಂಚದಲ್ಲಿ ಬಾಪು ನೆನಪು’ – ಕಲಾಕೃತಿಗಳು ಹಾಗೂ ಗಾಂಧೀ ಬಂದ’ ನಾಟಕ ಪ್ರದರ್ಶನವನ್ನು ಅಕ್ಟೋಬರ್ 2 ರಂದು ಸಂಜೆ 5.30 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ. ಅಲ್ಲದೆ ಗಾಂಧಿ ಜಯಂತಿಯನ್ನು ಎಲ್ಲಾ ಜಿಲ್ಲಾ ಕೇಂದ್ರದಲ್ಲೂ ಅಂದು ಬೆಳಿಗ್ಗೆ 9 ಗಂಟೆಗೆ ಏಕಕಾಲದಲ್ಲಿ ಆಚರಿಸಲಾಗುತ್ತದೆ. ’ನಮ್ಮ ಗಾಂಧಿ ತಾತ’ ಗ್ರಾಂಡ್ ಪಾ ಗಾಂಧಿ’ ಕರ್ನಾಟಕದಲ್ಲಿ ಮಹಾತ್ಮ ಗಾಂಧಿ ಹೆಜ್ಜೆಗಳು, ’ಗಾಂಧಿ ಜೀವನ ಸಂದೇಶ’ ಎಂಬ ಕಿರುಪುಸ್ತಕಗಳನ್ನು ಇಲಾಖೆ ಪ್ರಕಟಿಸಿದ್ದು, ಇದನ್ನು ಆಯಾ ಜಿಲ್ಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುವುದೆಂದರು.
ದೆಹಲಿಯ ಕೇಂದ್ರ ಗಾಂಧಿ ಸ್ಮಾರಕ ನಿರ್ಮಿಸಿರುವ ಸಾಕ್ಷ್ಯ ಚಿತ್ರದ ಕನ್ನಡ ಆವತಾರಣೆ ಸಿಡಿಗಳನ್ನು ಸಹ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು.
ಮಹಾತ್ಮ ಗಾಂಧಿಯವರ ಚಿತ್ರಗಳನ್ನು ಚಿತ್ರಿಸಲು ಕುಪ್ಪಳಿಯಲ್ಲಿ ನಡೆದ ’ ಕುಂಚದಲ್ಲಿ ಬಾಪು ನೆನಪು’ ಕಲಾ ಶಿಬಿರದಲ್ಲಿ ಬಿಡಿಸಿದ ಗಾಂಧೀಜಿಯವರ ಕುರಿತು ಕಲಾಚಿತ್ರಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುವುದು ಎಂದರು.