ಬೆಂಗಳೂರು : ಸಂಸತ್ ಮಾದರಿಯಲ್ಲಿ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಕಲಾಪಗಳ ನೇರ ಪ್ರಸಾರಕ್ಕೆ ಸರ್ಕಾರದಿಂದಲೇ ಪ್ರತ್ಯೇಕ ಟಿ.ವಿ ಚಾನಲ್ ಆರಂಭವಾಗುವುದು ಖಚಿತವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದ್ದಾರೆ ಎಂದು ವಾರ್ತಾ ಸಚಿವ ರೋಷನ್ ಬೇಗ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರಿ ಚಾನಲ್ ಆರಂಭದ ಪ್ರಸ್ತಾವನೆಗೆ ಮುಖ್ಯಮಂತ್ರಿಗಳ ಅನುಮತಿ ದೊರೆತಿದೆ. ಶೀಘ್ರದಲ್ಲಿ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ, ಅಗತ್ಯ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.
ವಿಧಾನಮಂಡಲದ ಉಭಯ ಸದನಗಳ ಕಲಾಪ ಪ್ರಸಾರಕ್ಕೆ ಪ್ರತ್ಯೇಕ ಚಾನಲ್ ಆರಂಭಿಸಬೇಕು ಎಂಬ ಬಹುದಿನಗಳ ಕನಸು ಈಡೇರಲಿದೆ. ಶೀಘ್ರದಲ್ಲಿ ಸರ್ಕಾರಿ ಚಾನಲ್ ಆರಂಭಿಸಲಾಗುವುದು ಎಂದು ತಿಳಿಸಿದರು.
ಸರ್ಕಾರಿ ಚಾನಲ್ ಆರಂಭವಾದರೆ ಸದನ ಹಾಗೂ ಮೊಗಸಾಲೆಗೆ ಖಾಸಗಿ ಚಾನಲ್ ಗಳಿಗೆ ಪ್ರವೇಶ ನಿಷೇಧಿಸುವ ಸಾಧ್ಯತೆಯಿದೆ. ಆಗ ಖಾಸಗಿ ಚಾನಲ್ ಗಳು ಸರ್ಕಾರಿ ಚಾನಲ್ ಕೃಪೆಯಿಂದ ಸುದ್ದಿಪ್ರಸಾರ ಮಾಡಬೇಕಾಗುತ್ತದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಲಾಪದ ವೇಳೆ ಸದನದಲ್ಲಿ ಬಹುಮತ ಸಾಬೀತು ವೇಳೆ ಶಾಸಕರು ಬಟ್ಟೆ ಹರಿದುಕೊಂಡು ಚೀರಾಡಿದ ಘಟನೆ, ಸಚಿವರು ಸದನದಲ್ಲೆ ಬ್ಲೂ ಫಿಲ್ಮ್ ನೋಡಿದ ಘಟನೆ ಹಾಗೂ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲೇ ನಿದ್ದೆ ಮಾಡುತ್ತಿದ್ದ ದೃಶ್ಯಾವಳಿಗಳು ಖಾಸಗಿ ಚಾನಲ್ ಗಳಲ್ಲಿ ಪ್ರಸಾರವಾಗಿ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿತ್ತು. ಇದಾದ ಬಳಿಕ ಸರ್ಕಾರದಿಂದಲೇ ಪ್ರತ್ಯೇಕ ಚಾನಲ್ ಆರಂಭಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂಗಿತ ವ್ಯಕ್ತಪಡಿಸಿದ್ದರು.