ಚೆನ್ನೈ : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಜೈಲು ಶಿಕ್ಷೆ ಹಿನ್ನಲೆಯಲ್ಲಿ ನೂತನ ಮುಖ್ಯಮಂತ್ರಿಯನ್ನಾಗಿ ಪನ್ನೀರ್ ಸೆಲ್ವಂ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ.
ಚೆನ್ನೈನಲ್ಲಿ ನಡೆದ ಎಐಎಡಿಎಂಕೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಪನ್ನೀರ್ ಸೆಲ್ವಂ ಅವರನ್ನು ಅವಿರೋಧವಾಗಿ ಶಾಸಕಾಂಗ ಪಕ್ಷದ ನೂತನ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಸೆಲ್ವಂ ಪ್ರಸ್ತುತ ತಮಿಳುನಾಡು ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಎರಡನೆ ಬಾರಿಗೆ ಸಿಎಂ ಪಟ್ಟ ಒಲಿದುಬಂದಿದೆ.
2001ರಲ್ಲಿ ಜಯಲಲಿತಾ ತಾನ್ಸಿ ಭೂ ಹಗರಣದಲ್ಲಿ ಸಿಲುಕಿದ್ದರು. ಆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂದು ಕೆಲ ತಿಂಗಳ ವರೆಗೆ ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿದ್ದರು. ಆದರೆ ಜಯಲಲಿತಾ ಆರೋಪದಿಂದ ಮುಕ್ತರಾಗಿ ವಾಪಸ್ ಬರುವವೆರೆಗೂ ಅವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತಿರಲಿಲ್ಲ, ಬೇರೆ ಕುರ್ಚಿ ತರಿಸಿ ಕುಳಿತುಕೊಳ್ಲುತ್ತಿದ್ದರು. ಅಷ್ಟರ ಮಟ್ಟಿಗೆ ಪನ್ನೀರ್ ಸೆಲ್ವಂ ಜಯಲಲಿತಾ ಅವರನ್ನು ಗೌರವಿಸುತ್ತಿದ್ದರು. ಈಗ ಮುಖ್ಯಮಂತ್ರಿಯಾಗಿ ಪನ್ನೀರ್ ಸೆಲ್ವಂ ಆಯ್ಕೆಯಾಗಿದ್ದರೂ ಅಧಿಕಾರ ಜಯಲಲಿತಾ ಕೈಯಲ್ಲೇ ಇರಲಿದೆ ಎನ್ನಲಾಗುತ್ತಿದೆ.
ಸಂಜೆ ಪನ್ನೀರ್ ಸೆಲ್ವಂ ಸೇರಿದಂತೆ ಪ್ರಮುಖ ನಾಯಕರು ರಾಜಭವನಕ್ಕೆ ತೆರಳಿ, ರಾಜ್ಯಪಾಲ ರೋಸಯ್ಯ ಅವರನ್ನು ಭೇಟಿಯಾಗಲಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಆಯ್ಕೆ ಕುರಿತು ಮಾಹಿತಿ ನೀಡಿ ಸರ್ಕಾರ ರಚನೆಗೆ ಆಹ್ವಾನ ನೀಡುವಂತೆ ಕೋರಲಿದ್ದಾರೆ.