Untitled Document
Sign Up | Login    
Dynamic website and Portals
  
September 27, 2014

ಜಯಲಲಿತಾ ವಿರುದ್ಧದ ಆರೋಪ ಸಾಬೀತು: 4 ವರ್ಷ ಜೈಲು ಶಿಕ್ಷೆ

ಜಯಲಲಿತಾ ಜಯಲಲಿತಾ

ಬೆಂಗಳೂರು : ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತಾದ ಹಿನ್ನಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಆವರಣದಲ್ಲಿ ಸ್ಥಾಪಿಸಲಾಗಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ಜಯಲಲಿತಾ ಸೇರಿದಂತೆ ನಾಲ್ವರು ಅಪರಾಧಿಗಳಿಗೆ 4 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಈ ಮೂಲಕ 18 ವರ್ಷಗಳಿಂದ ವಿಚಾರಣೆ ನಡೆಯುತಿದ್ದ ಪ್ರಕರಣಕ್ಕೆ ತೆರೆಬಿದ್ದಂತಾಗಿದೆ.

ಆದಾಯಕ್ಕೂ ಮೀರಿ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಜಯಲಲಿತಾ, ದತ್ತುಪುತ್ರ ಸುಧಾಕರ್, ಜಯಲಲಿತಾ ಸ್ನೇಹಿತೆ ವಿ.ಕೆ.ಶಶಿಕಲಾ, ಜೆ.ಇಳವರಸಿ ಸೇರಿದಂತೆ ನಾಲ್ವರು ಅಪರಾಧಿಗಳಿಗೂ ಜೈಲು ಶಿಕ್ಷೆ ನೀಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಲಲಿತಾ ಅವರಿಗೆ 100 ಕೋಟಿ ರೂ ದಂಡ ಹಾಗೂ ಉಳಿದ ಮೂವರು ಅಪರಾಧಿಗಳಿಗೆ ತಲಾ 10 ಕೋಟಿ ರೂ ದಂಡ ವಿಧಿಸಲಾಗಿದೆ.

ವಿಚಾರಣೆ ವೇಳೆ ತಮಗೆ ಅನಾರೋಗ್ಯದ ಸ್ಥಿತಿಯಿದ್ದು,ಅಪೊಲೋ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಅನುಮತಿ ನೀಡಬೇಕು ಎಂದು ಜಯಲಲಿತಾ ಮನವಿ ಮಾಡಿದ್ದರು. ಕಾರಾಗ್ರಹದ ವೈದ್ಯರಿಂದಲೇ ತಪಾಸಣೆ ನಡೆಸಲಾಗುತ್ತದೆ. ಒಂದು ವೇಳೆ ಕಾರಾಗ್ರಹದ ವೈದ್ಯರು ಬೇರೆ ಆಸ್ಪತ್ರೆಗೆ ರವಾನಿಸಬೇಕೆಂದು ಶಿಫಾರಸು ಮಾಡಿದರೆ ಮಾತ್ರ ಅವಕಾಶ ನೀಡಲಾಗುವುದು ಎಂದು ನ್ಯಾಯಾಧೀಶರು ಜಯಲಲಿತಾ ಮನವಿ ತಿರಸ್ಕರಿಸಿದರು.

ಪ್ರರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ದೋಷಿ ಎಂದು ಬೆಳಿಗ್ಗೆಯೇ ತೀರ್ಪು ಪ್ರಕಟಿಸಿತ್ತಾದರೂ ಶಿಕ್ಷೆ ಪ್ರಮಾಣವನ್ನು ಕಾಯ್ದಿರಿಸಿತ್ತು.

ಜಯಲಲಿತಾ 1991ರಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. 5 ವರ್ಷದ ಅಧಿಕಾರಾವಧಿಯಲ್ಲಿ ಘೋಷಣೆಗಿಂತ ಅಧಿಕ ಆಸ್ತಿ ಗಳಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ತಮ್ಮ ಬಳಿ 3 ಕೋಟಿ ರೂ.ಮೌಲ್ಯದ ಆಸ್ತಿ ಇದೆ ಎಂದು 1991ರಲ್ಲಿ ಜಯಲಲಿತಾ ಘೋಷಿಸಿಕೊಂಡಿದ್ದರು. ಅಲ್ಲದೇ ಅಧಿಕಾರಾವಧಿಯಲ್ಲಿ ಮಾಸಿಕ 1ರೂ. ವೇತನ ಪಡೆಯುವುದಾಗಿ ಹೇಳಿಕೊಂಡಿದ್ದರು. ಆದರೆ 5 ವರ್ಷದ ಅಧಿಕಾರಾವಧಿ ಮುಗಿಯುತ್ತಿದ್ದಂತೆಯೇ ಜಯಾ ಆಸ್ತಿ ಮೌಲ್ಯ 65.86 ಕೋಟಿ ರೂ.ಗೆ ಏರಿಕೆಯಾಗಿತ್ತು.

ಈ ಕುರಿತು ಡಿಎಂಕೆ ದೂರಿನನ್ವಯ ವಿಶೇಷ ತನಿಖಾ ತಂಡ ರಚಿಸಿ ತನಿಖೆ ಕೈಗೊಂಡಾಗ 28 ಕೆ.ಜಿ ಚಿನ್ನ, 12 ಸಾವಿರ ಸೀರೆಗಳು, ಕೊಡನಾಡು, ತಿರುನೆಲ್ವೇಲಿಯಲ್ಲಿ ತಲಾ1 ಸಾವಿರ ಎಕರೆ ಜಮೀನು, 100ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳು ಪತ್ತೆಯಾಗಿದ್ದವು. ಈ ಹಿನ್ನಲೆಯಲ್ಲಿ 1996ರಲ್ಲಿ ಸೆ.18 ರಂದು ಜಯಲಲಿತಾ ಮತ್ತು ಅವರ ದತ್ತುಪುತ್ರ ಸುಧಾಕರನ್, ಸ್ನೇಹಿತೆ ಶಶಿಕಲಾ ನಟರಾಜನ್, ಜೆ.ಇಳವರಸಿ ವಿರುದ್ಧ ಪ್ರಕರಣ ದಾಖಲಾಗಿತ್ತು.

1997ರಲ್ಲಿ ತನಿಖಾ ತಂಡ ಆರೋಪ ಪಟ್ಟಿ ಸಲ್ಲಿಸಿತ್ತು. ಈ ವೇಳೆ ಜಯಲಲಿತಾ ಪ್ರಕರಣದ ವಿಚಾರಣೆ ನ್ಯಾಯ ಸಮ್ಮತವಾಗಿ ನಡೆಯಲು ಪ್ರಕರಣವನ್ನು ರಾಜ್ಯದಿಂದ ಹೊರಕ್ಕೆ ಸ್ಥಳಾಂತರಿಸಬೇಕು ಎಂದು ಡಿಎಂಕೆ ಸುಪ್ರೀಂ ಕೋರ್ಟ್ ಮೊರೆಹೋಗಿತ್ತು.

ಈ ಮಧ್ಯೆ ಡಿಎಂಕೆ ತಮಿಳುನಾಡಿನಲ್ಲಿ ಅಧಿಕಾರಕ್ಕೇರಿದ ಹಿನ್ನಲೆಯಲ್ಲಿ ಆ ಪಕ್ಷ ತಮ್ಮ ವಿರುದ್ಧ ಪಿತೂರಿ ಮಾಡಿ ಪ್ರಕರಣದಲ್ಲಿ ಸಿಲುಕಿಸುವ ಸಾಧ್ಯತೆ ಇದ್ದು, ರಾಜ್ಯದಿಂದ ವಿಚಾರಣೆಯನ್ನು ಹೊರಗೆ ನಡೆಸಬೇಕು ಎಂದು ಜಯಲಲಿತಾ ಕೂಡ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಮುಕ್ತ ಮತ್ತು ನ್ಯಾಯಸಮ್ಮತ ವಿಚಾರಣೆಗಾಗಿ ಸುಪ್ರೀಂ ಕೋರ್ಟ್ 2001 ರಲ್ಲಿ ಬೆಂಗಳೂರಿನಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಿ ವಿಚಾರಣೆ ನಡೆಸುವಂತೆ ಆದೇಶ ನೀಡಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited