ಬೆಂಗಳೂರು : ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 16 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಕ ಮಾಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖಾ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು ಇಲಾಖೆಯಲ್ಲಿ ಸುಮಾರು 28 ಸಾವಿರ ಹುದ್ದೆಗಳು ಬಾಕಿ ಇದ್ದು ಸಧ್ಯ 16 ಸಾವಿರ ಹುದ್ದೆಗಳನ್ನು ಭರ್ತಿಮಾಡುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಇನ್ನು ಮುಂದೆ ಪ್ರತಿವರ್ಷ 4 ರಿಂದ 5 ಸಾವಿರ ಶಿಕ್ಷಕರನ್ನು ಭರ್ತಿಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ವಿದ್ಯಾರ್ಥಿಗಳ ಅರ್ಹತೆಯನ್ನು ಪರೀಕ್ಷಿಸುವ ದೃಷ್ಟಿಯಿಂದ 5 ಮತ್ತು 8 ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಬೇಕೆಂಬುದು ನನ್ನ ಸ್ವಂತ ಅಭಿಪ್ರಾಯವಾಗಿದೆ ಎಂದ ಸಚಿವರು, ಈ ಸಂಬಂಧ ತಜ್ಞರ ಜೊತೆ ಚರ್ಚಿಸಿ ಅಂತಿ ತೀರ್ಮಾನಕೈಗೊಳ್ಳಲಾಗುವುದು. ಹೀಗೆ ನಡೆಸುವ ಪರೀಕ್ಷೆಯಲ್ಲಿ ಯಾವ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವುದಿಲ್ಲ ಎಂದ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳುವುದಿಲ್ಲ ಎಂದರು.
ಭಾಷಾ ಮಾಧ್ಯಮ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ 3 ರಿಂದ 4 ಸಭೆಗಳನ್ನುನಡೆಸಿ ಚರ್ಚಿಸಲಾಗಿದ್ದು, ದಸರಾ ಮುಗಿದ ನಂತರ ಸಾಹಿತಿಗಳು, ಕನ್ನಡ ಪರ ಸಂಘಗಳು ಹಾಗೂ ಕನ್ನಡ ಪರ ಹೋರಾಟಗಾರರ ಸಭೆ ಕರೆದು ಚರ್ಚಿಸಲಾಗುವುದು ಎಂದ ಕಿಮ್ಮನೆ ರತ್ನಾಕರ್ ಅವರು ಈ ಸಂಬಂಧ ರಾಜ್ಯದ ಮುಖ್ಯಮಂತ್ರಿ ಅವರು ಅಂತಿಮ ತೀರ್ಮಾನ ಕೈಕೊಳ್ಳಲಿದ್ದಾರೆ ಎಂದರು.
ಇನ್ನು ಮುಂದೆ ಶಿಕ್ಷಕರಾಗಿ ಆಯ್ಕೆಗೊಂಡವರು ಇಲಾಖೆ ನೇಮಕ ಮಾಡುವ ಶಾಲೆಯಲ್ಲಿ ಶಿಕ್ಷಕರು ಕಡ್ಡಾಯವಾಗಿ 3 ವರ್ಷಗಳ ಸೇವೆಯನ್ನು ಸಲ್ಲಿಸಬೇಕು. ಯಾವ ಜಿಲ್ಲೆಯಲ್ಲಿ ಶಿಕ್ಷಕರು ನೇಮಕಗೊಳ್ಳುತ್ತಾರೋ ಅದೇ ಜಿಲ್ಲೆಯಲ್ಲಿ ಕನಿಷ್ಟ 10 ವರ್ಷ ಸೇವೆ ಸಲ್ಲಿಸಬೇಕು. ರಾಜ್ಯ ಸರ್ಕಾರವು ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (TET) ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿಯೇ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.