ಬೆಂಗಳೂರು : ರಾಜ್ಯದಲ್ಲಿ 1ರಿಂದ 5ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕೊನೆಯ ಅಸ್ತ್ರವಾಗಿ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವ ರಾಜ್ಯ ಸರ್ಕಾರ, ಬಜೆಟ್ ಅಧಿವೇಶನದಲ್ಲೇ ತಿದ್ದುಪಡಿ ಕಾಯ್ದೆ ಮಂಡಿಸಲು ತೀರ್ಮಾನಿಸಿದೆ.
ಜತೆಗೆ ರಾಜ್ಯದ ಎಲ್ಲ ಶಾಲೆಗಳಲ್ಲೂ 1ರಿಂದ 12ನೇ ತರಗತಿವರೆಗೆ ಕನ್ನಡ ಒಂದು ಭಾಷೆಯಾಗಿ ಕಲಿಸುವುದು ಕಡ್ಡಾಯ ಮಾಡುವ ಕಾಯ್ದೆಯನ್ನೂ ಮಂಡಿಸಲು ನಿರ್ಧರಿಸಿದೆ.
ಭಾಷಾ ಮಾಧ್ಯಮ ನೀತಿ ಕುರಿತು ವಿಧಾನಸೌಧದಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, 1ರಿಂದ 5ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕು ಎಂಬುದು ರಾಜ್ಯ ಸರ್ಕಾರದ ಇಚ್ಛಾಶಕ್ತಿ. ಈ ಬಗ್ಗೆ ಇರುವ ಕಾನೂನು ತೊಡಕು ನಿವಾರಣೆಗಾಗಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಮಾರ್ಚ್ 13ರಿಂದ ಆರಂಭವಾಗುವ ವಿಧಾನಮಂಡಲದ ಅಧಿವೇಶನದಲ್ಲೇ ತಿದ್ದುಪಡಿ ಕಾಯ್ದೆ ಮಂಡಿಸಲಾಗುವುದು. ಜತೆಗೆ ಉಭಯ ಸದನಗಳಲ್ಲೂ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು. ಸಂಪುಟದಲ್ಲೂ ಈ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
1ರಿಂದ 5ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕಡ್ಡಾಯಗೊಳಿಸುವ ವಿಚಾರದಲ್ಲಿ ಇಡೀ ರಾಜ್ಯ ಒಮ್ಮತದಲ್ಲಿದೆ ಎಂದು ನ್ಯಾಯಾಲಯ, ಸಂಸತ್ಗೆ ಸಂದೇಶ ನೀಡುವ ಸಲುವಾಗಿ ವಿಧಾನಮಂಡಲದ ಉಭಯ ಸದನಗಳಲ್ಲಿ ನಿರ್ಣಯ ಕೈಗೊಳ್ಳಬೇಕಿದೆ. ಭಾಷಾ ಮಾಧ್ಯಮ ನೀತಿ ಕುರಿತು ಸುಪ್ರೀಂಕೋರ್ಟ್ಗೆ ಮಾರ್ಚ್ 31ರೊಳಗೆ ರಾಜ್ಯದ ಅಭಿಪ್ರಾಯ ತಿಳಿಸಬೇಕಿದ್ದು, ಮೇಲ್ಕಂಡ ಎಲ್ಲ ಕ್ರಮಗಳು ಸರ್ಕಾರದ ಉದ್ದೇಶ ಈಡೇರಲು ಪೂರಕವಾಗಲಿದೆ ಎಂದು ಹೇಳಿದರು.
ಈ ಮಧ್ಯೆ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ಎಲ್ಲ ಸಂಸದರಿಗೆ ಪತ್ರ ಬರೆದು ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಸಂಸತ್ನಲ್ಲಿ ಖಾಸಗಿ ನಿರ್ಣಯ ಮಂಡಿಸುವಂತೆ ಮನವಿ ಮಾಡಲಾಗಿದ್ದು, ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.
ಭಾಷಾ ನೀತಿ ಪ್ರಕಾರವೇ ರಾಜ್ಯಗಳು ವಿಂಗಡಣೆಯಾಗಿದ್ದು, ಸ್ಥಳೀಯ ಭಾಷೆಗೆ ಮನ್ನಣೆ ನೀಡಿ ಉಳಿಸಿ, ಬೆಳೆಸಲು ಸಂವಿಧಾನಕ್ಕೆ ತಿದ್ದುಪಡಿ ತರುವ ಅಗತ್ಯವಿದೆ. ಈ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಬೇಕಾಗಿದ್ದು, ತಾವು ಸೂಚಿಸಿದ ದಿನದಂದು ಸಮಾಲೋಚನೆಗೆ ಬರಲು ಸರ್ಕಾರದ ಪರವಾಗಿ ನಾನು ಸಿದ್ಧನಿದ್ದೇನೆ ಎಂದು ಪ್ರಧಾನಮಂತ್ರಿ, ಕೇಂದ್ರ ಮಾನವ ಸಂಪನ್ಮೂಲ ಹಾಗೂ ಗೃಹ ಸಚಿವರಿಗೂ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.