ನವದೆಹಲಿ : 'ಮೇಕ್ ಇನ್ ಇಂಡಿಯಾ' ಬರೀ ಅಭಿಯಾನವಲ್ಲ, ಅದು ನಮ್ಮೆಲ್ಲರ ಜವಾಬ್ದಾರಿ. ದೇಶದ ಬಡ ನಾಗರಿಕನಿಗೂ ಉದ್ಯೋಗ ನೀಡಿ ಭಾರತದ ಅಭಿವೃದ್ಧಿಗೆ ನಾಂದಿ ಹಾಡೋಣ ಎಂದು ಉದ್ಯಮಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ನವದೆಹಲಿಯ ವಿಜ್ನಾನಭವನದಲ್ಲಿ ಮಹತ್ವಾಕಾಂಕ್ಷಿ ಯೋಜನೆ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿ, ಉದ್ಯಮಿಗಳನ್ನುದ್ದೇಶಿಸಿ ಮಾತನಾಡಿದ ಅವರು ಎಲ್ಲರೂ ಸೇರಿ ಮೇಕ್ ಇನ್ ಇಂಡಿಯಾ ಜವಾಬ್ದಾರಿ ವಹಿಸೋಣ ಎಂದರು. ಜಗತ್ತಿಗೆ ತಮ್ಮ ಮೇಕ್ ಇನ್ ಇಂಡಿಯಾ ಕನಸಿನ ವಿಚಾರ ತೆರೆದಿಟ್ಟರು.
ಕಳೆದ ಎರಡು ಮೂರು ವರ್ಷಗಳಿಂದ ನಾನು ಉದ್ಯಮಿಗಳಿಗೆ ದೇಶದಲ್ಲಿ ಬಂಡವಾಳ ಹೂಡಿ ಎಂದು ಹೇಳುತ್ತಿದ್ದೆ. ಯಾವುದೇ ರಾಜಕೀಯ ಉದ್ದೇಶಗಳಿಂದ ಹೇಳುತ್ತಿಲ್ಲ. ಯಾರನ್ನು ಕೇಳಿದರೂ ಕಂಪನಿಗಳು ದೇಶ ಬಿಟ್ಟು ಹೋಗುತ್ತಿವೆ ಎನ್ನುತ್ತಿದ್ದರು. ಯಾವುದೇ ಕಂಪನಿಗಳು ದೇಶ ಬಿಟ್ಟುಹೊಗುವುದು ನಮಗಿಷ್ಟವಿಲ್ಲ. ಉದ್ಯಮಿಗಳಿಗೆ ನಾವು ಭರವಸೆ ನೀಡುತ್ತಿದ್ದೇವೆ. ಉದ್ಯಮಿಗಳಿಗೆ ನೆರವು ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ ಎಂದು ತಿಳಿಸಿದರು.
ಭಾರತದಿಂದ ಕೆಲ ಕಂಪನಿಗಳು ಪಲಾಯನ ಮಾಡಿವೆ. ವಿದೇಶಗಳಿಗೆ ಪಲಾಯನ ಮಾಡುವ ಪರಿಸ್ಥಿತಿ ಮೊದಲು ಬದಲಾಗಬೇಕಿದೆ. ಯೋಚನೆಗಳು ಬದಲಾದರೆ ದೇಶ ತನ್ನಿಂದ ತಾನೇ ಬದಲಾಗುತ್ತದೆ. ಯಾವುದೇ ಕಂಪನಿಗಳಿಗೆ ನಾವು ಆಹ್ವಾನ ನೀಡುತ್ತಿಲ್ಲ, ಬದಲಾಗಿ ವಿಳಾಸ ನೀಡುತ್ತಿದ್ದೇವೆ. ಕಂಪನಿಗಳು ಹುಡುಕುತ್ತಿರುವ ಜಾಗಗಳನ್ನು ತೋರಿಸುತ್ತೇವೆ ಎಂದು ಆಹ್ವಾನ ನೀಡಿದರು.
ಭಾರತ ವಿಶ್ವದಲ್ಲಿಯೇ ದೊಡ್ಡ ಮಾರುಕಟ್ಟೆಯಿದ್ದಂತೆ. ಹೆಚ್ಚು ಹೆಚ್ಚು ಕಂಪನಿಗಳು ಬಂದು ಇಲ್ಲಿ ಉದ್ಯಮಗಳನ್ನು ಆರಂಭಿಸಿದಾಗ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಇದರಿಂದ ಜನರಿಗೆ ಕೊಂಡುಕೊಳ್ಳುವ ಸಾಮಥ್ಯ ಹೆಚ್ಚುತ್ತದೆ. ಈ ಮೂಲಕ ಕಂಪನಿಗಳಿಗೆ ಲಾಭವಾಗುತ್ತದೆ. ಮೊದಲು ನಾವು ದೇಶದ ಮೇಲೆ ನಂಬಿಕೆಯಿಡಬೇಕು. ಉದ್ಯಮಿಗಳಿಗೆ ನಮ್ಮ ಮೇಲೆ ನಂಬಿಕೆ ಬರುವಂತೆ ಮಾಡಬೇಕು ಎಂದ ಪ್ರಧಾನಿ ಮೋದಿ, ಎಫ್.ಡಿ.ಐ ಗೆ ಹೊಸ ವ್ಯಾಖ್ಯಾನ ನೀಡಿದರು. ಎಫ್.ಡಿ.ಐ ಎಂದರೆ ಫಸ್ಟ್ ಡೆವೆಲಪ್ ಇಂಡಿಯ . ಹೀಗಾಗಿ ನಾವು ಹೇಳುತ್ತೇವೆ ಕಮ್, ಮೇಕ್ ಇನ್ ಇಂಡಿಯಾ (ಬನ್ನಿ ಭಾರತದಲ್ಲಿ ತಯಾರಿಸಿ) ಎಂದು ತಿಳಿಸಿದರು.
ಭಾರತವನ್ನು ನಿಮ್ಮದೆಂದು ತಿಳಿದುಕೊಂಡು, ರಾಜ್ಯಗಳಲ್ಲಿ ಬಂಡವಾಳ ಹೂಡಿ ಉದ್ಯಮ ಆರಂಭಿಸಿ. ನಿಮ್ಮ ಉದ್ಯಮಗಳಲ್ಲಿ ಭಾರತೀಯ ವಸ್ತುಗಳನ್ನು ಉತ್ಪಾದಿಸಿ. ನಮ್ಮ ದೇಶದ ಯುವಕರಿಗೆ ಉದ್ಯೋಗ ನೀಡಿ ಎಂದು ಆಹ್ವಾನ ನೀಡಿದರು. ನಾವು ಉದ್ಯಮಗಳಿಗೆ ಜಾಗತಿಕವಾಗಿ ಸಹಕಾರ ನೀಡುತ್ತೇವೆ. ನೀವು ಹೂಡಿಕೆ ಮಾಡಿದ ಬಂಡವಾಳ ಎಂದೂ ನಷ್ಟವಾಗುವುದಿಲ್ಲ. ರಾಜ್ಯದಲ್ಲಿ ಬಂಡವಾಳ ಹೂಡಿಕೆಯಾದರೆ ಅದು ದೇಶದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದರು.
ಜನರ ಕೌಶಲ್ಯ ಅಭಿವೃದ್ಧಿಯಾಗಬೇಕಿದೆ. ಕೌಶಲಾಭಿವೃದ್ಧಿಗೆ ಸರ್ಕಾರದಿಂದಲೇ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತ್ತದೆ. ನಾವು ಪ್ರವಾಸೋದ್ಯಮದ ಅಭಿವೃದ್ಧಿ ಬಗ್ಗೆ ಮಾತನಾಡುತ್ತೇವೆ. ಆದರೆ ಪ್ರವಾಸೋದ್ಯಮದ ಬಗ್ಗೆ ಗೈಡ್ ಗಳ ನೇಮಕದ ಬಗ್ಗೆ ಯೋಚಿಸುವುದಿಲ್ಲ. ಅವಶ್ಯಕತೆಗನುಗುಣವಾಗಿ ಮಾನವ ಸಂಪನ್ಮೂಲಬೇಕು. ದೇಶದಲ್ಲಿ ಕೌಶಲ್ಯಾಧಾರಿತ ಅಭಿವೃದ್ಧಿ ಅಗತ್ಯವಿದೆ. ಉದ್ಯೋಗ ದೃಷ್ಟಿಯಿಂದಲೇ ಶೈಕ್ಷಣಿಕ ತರಬೇತಿ ನೀಡಬೇಕು. ವಿಮಾನಯಾನ, ಸಾರಿಗೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಬಂಡವಾಳ ಹೂಡಲು ಅವಕಾಶ ನೀಡಿದರೆ ಜಾಗತಿಕ ಮಟ್ಟದಲ್ಲಿ ನಾವು ಯಶಸ್ವಿಯಾಗುತ್ತೇವೆಎಂದು ಅಭಿಪ್ರಾಯಪಟ್ಟರು.
ಬಂಡವಾಳ ಹೂಡುವವನಿಗೆ ಮೊದಲು ಆತನ ಹಣಕ್ಕೆ ಭದ್ರತೆ ಬೇಕು. ಬಳಿಕ ಆತ ಅದರ ಬೆಳವಣಿಗೆ ಬಯಸುತ್ತಾನೆ, ನಂತರ ಲಾಭದ ಬಗ್ಗೆ ಯೋಚಿಸುತ್ತಾನೆ. ಅಭಿವೃದ್ಧಿ ಹಾಗೂ ಅಭಿವೃದ್ಧಿ ಪೂರಕ ವಾತಾವರಣ ನಿರ್ಮಿಸುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.