ನವದೆಹಲಿ : ಭಾರತವನ್ನು ತಯಾರಿಕಾ ಘಟಕದ ಹಬ್ ಆಗಿ ಪರಿವರ್ತಿಸಬೇಕು ಎಂಬುದು ಮೋದಿ ಕನಸು. ಇಂತಹ ಅಭಿಯಾನ ಯಶಸ್ವೀಗೊಳಿಸುವುದು ನಮ್ಮೆಲ್ಲರ ಕರ್ತವ್ಯ. ಭಾರತದ ಕೈಗಾರಿಕೆಗೆ ಇಂದು ಐತಿಹಾಸಿಕ, ಸುದಿನ ಎಂದು ಉದ್ಯಮಿ ಮುಖೇಶ್ ಅಂಬಾನಿ ಅಭಿಪ್ರಾಯ ಪಟ್ಟಿದ್ದಾರೆ.
ಮೇಕ್ ಇನ್ ಇಂಡಿಯಾ ಅಭಿಯನದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿರುವುದು ಈ ದೇಶದ ಭಾಗ್ಯ, ಮೋದಿಯವರ ಅಭೂತಪೂರ್ವ ಕನಸಿಗೆ ನಾವೆಲ್ಲ ಸಾಥ್ ನೀಡಬೇಕು. ಭಾರತದಲ್ಲಿ ಮಾರುಕಟ್ಟೆ ಸ್ಪರ್ಧೆ ಬಗ್ಗೆ ಅನುಮಾನ ಬೇಡ. ಮೋದಿ ಯೋಚನೆಗಳು ಅನನ್ಯ ಗುಣಮಟ್ಟದಿಂದ ಕೂಡಿದೆ. ಕೈಗಾರಿಕೆಗೆ ಉತ್ತೇಜನ ನೀಡಲು ಮೋದಿ ಯತ್ನಿಸಿದ್ದಾರೆ. ಭಾರತವನ್ನು ಪ್ರಮುಖ ಉತ್ಪಾದಕ ದೇಶವನ್ನಾಗಿ ಮಾಡಬೇಕಿದೆ. ರಿಲಾಯನ್ಸ್ ಇಂಡ್ರಸ್ಟ್ರಿ ಮುಂದಿನ 12-15 ತಿಂಗಳಲ್ಲಿ 1.25 ಲಕ್ಷ ಉದ್ಯೋಗ ಸೃಷ್ಟಿಮಾಡಲಿದೆ ಎಂದು ಭರವಸೆ ನೀಡಿದರು.
ಭಾರತವನ್ನು ಪ್ರಮುಖ ಉತ್ಪಾದಕ ದೇಶವನ್ನಾಗಿಸುವ ಎನ್.ಡಿ.ಎ ಸರ್ಕಾರದ ಮಹತ್ವಕಾಂಕ್ಷಿ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ನವದೆಹಲಿಯ ವಿಜ್ನಾನ ಭವನದಲ್ಲಿ ಪ್ರಧಾನಿ ಮೋದಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದು, ಈ ಕಾರ್ಯಕ್ರಮದಲ್ಲಿ ಜಗತ್ತಿನ 500 ಕಂಪನಿಗಳ ಸಿಇಒಗಳು ಭಾಗಿಯಾಗಿದ್ದಾರೆ.
ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ ಪರಿವರ್ತಿಸಲು ಪ್ರಧಾನಿ ಮೋದಿ ಮೇಕ್ ಇನ್ ಇಂಡಿಯ ಅಭಿಯಾನದ ಘೋಷಣೆ ಮಾಡಿದ್ದು, ವಿಶ್ವದ ವಿವಿಧ ಕಂಪನಿಗಳಿಗೆ ರೆಡ್ ಕಾರ್ಪೇಟ್ ಆಹ್ವಾನ ನೀಡಿದ್ದಾರೆ. ಈ ಮಹತ್ವಾಕಾಂಕ್ಷಿ ಯೋಜನೆ ದೇಶದಲ್ಲಿ 10 ಸಾವಿರ ಮಿಲಿಯನ್ ಉದ್ಯೋಗ ಸೃಷ್ಟಿಯ ಕನಸು ಹೊಂದಿದೆ.
ಈ ಅಭಿಯಾನದಲ್ಲಿ 25 ಕ್ಷೇತ್ರಗಳಲ್ಲಿ ಬಂಡವಾಳ ಹೂಡಲು ಆಹ್ವಾನಿಸಲಾಗಿದ್ದು, ಹೂಡಿಕೆದಾರರಿಗೆ ಅಗತ್ಯವಾದ ಎಲ್ಲಾ ಅನುಕೂಲಗಳನ್ನು ಕೇಂದ್ರ ಸರ್ಕಾರ ಮಾಡಿಕೊಡಲು ಸಿದ್ಧವಿದೆ. ಉದ್ಯಮ ವಲಯ, ಬಂಡವಾಳ ಹೂಡಿಕೆದಾರರಿಗೆ ಅನುವಾಗುವಂತೆ ಮಾಹಿತಿ-ಉತ್ತರಗಳನ್ನು ನೀಡಲು ಕೇಂದ್ರವನ್ನು ತೆರೆಯಲಾಗುತ್ತಿದ್ದು, ಮಾಹಿತಿ ಕೇಳಿದ 72 ಗಂಟೆಗಳಲ್ಲಿ ಅವರಿಗೆ ಉತ್ತರ ನೀಡಲಾಗುತ್ತದೆ.
ರಾಜ್ಯಮಟ್ಟದಲ್ಲೂ ಈ ಕುರಿತ ಆಂದೋಲನಗಳು ನಡೆಯಲಿದ್ದು, ನಿರ್ದಿಷ್ಟ ದೇಶಗಳ ಕಂಪನಿಗಳಿಗೂ ಅವಕಾಶ ನೀಡಲಾಗುತ್ತದೆ.