ಬೀಜಿಂಗ್ : ಪ್ರಾದೆಷಿಕ ಯುದ್ಧವೊಂದನ್ನು ಗೆಲ್ಲಲು ತಯಾರಾಗಿರಿ ಎಂದು ಚೀನಾ ಸೇನೆಗೆ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕರೆ ನೀಡಿದ್ದು, ಈ ಕರೆ ಚೀನಾದ ನೆರೆ ರಾಷ್ಟ್ರ ಭಾರತ ಹಾಗೂ ವಿಶ್ವದ ಇತರ ರಾಷ್ಟ್ರಗಳ ಆತಂಕಕ್ಕೆ ಕಾರಣವಾಗಿದೆ.
ಒಂದೆಡೆ ಚೀನಾ ಪಡೆಗಳು ಭಾರತದ ಗಡಿಯಲ್ಲಿ ಬೀಡು ಬಿಟ್ಟಿವೆ. ಇನ್ನೊಂದೆಡೆ ಜಪಾನ್, ವಿಯೆಟ್ನಾಂ, ಟಿಬೆಟ್ ಸೇರಿದಂತೆ ಕೆಲ ನೆರೆ ದೇಶಗಳೊಂದಿಗೆ ಚೀನಾ, ಸಮುದ್ರ ಹಾಗೂ ಭೂ ವ್ಯಾಜ್ಯವನ್ನು ಹೊಂದಿದೆ. ಹೀಗಿರುವಾಗ ಕ್ಸಿ ಜಿನ್ ಪಿಂಗ್, ಚೀನಾ ಸೇನೆ ಪೀಪಲ್ಸ್ ಲಿಬರೇಶನ್ ಆರ್ಮಿಗೆ ಯುದ್ಧಗೆಲ್ಲಲು ಸಿದ್ಧರಾಗಿ ಎಂದು ಹೇಳಿರಿರುವುದು ಯಾರನ್ನು ಉದ್ದೇಶಿಸಿ ಹೇಳಿರುವುದೆಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಈ ನಡುವೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಕರೆ ಭಾರತವನ್ನುದ್ದೇಶಿಸಿ ಅಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕ್ಸಿ ಜಿನ್ ಪಿಂಗ್ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಇಲಾಖೆ ವಕ್ತಾರರು, ಅಧ್ಯಕ್ಷರ ಹೇಳಿಕೆಯನ್ನು ಯುದ್ಧದ ರೀತಿಯಲ್ಲಿ ಪರಿಗಣಿಸುವುದು ಸರಿಯಲ್ಲ. ಉಭಯ ದೇಶಗಳ ಗಡಿ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ನಿರ್ಧರಿಸಿರುವಾಗ ಇಂಥಹ ಕಲ್ಪನೆ ತಪ್ಪು ಎಂದು ಹೇಳಿದ್ದಾರೆ.
ಸೇನೆಯ ಮುಖ್ಯಸ್ಥರು ಮತ್ತು ಪಡೆಗಳು ಚೀನಾದ ಕಮ್ಯುನಿಸ್ಟ್ ಪಕ್ಷಕ್ಕೆ ನಿಷ್ಠರಾಗಿರಬೇಕು ಮತ್ತು ಪಕ್ಷದ ಮೇಲೆ ನಂಬಿಕೆ ಹೊಂದಿರಬೇಕು. ಪಕ್ಷ ಕೈಗೊಳ್ಳುವ ಎಲ್ಲಾ ನಿರ್ಧಾರಗಳನ್ನು ಸೇನೆಯು ಅನುಷ್ಠಾನಗೊಳಿಸಬೇಕು ಎಂದು ಚೀನಾ ಅಧ್ಯಕ್ಷರು ಹೇಳಿದ್ದಾರೆ.
ಸೇನೆಯ ಎಲ್ಲಾ ಮುಖ್ಯ ಘಟಕಗಳು ಯುದ್ಧಕ್ಕೆ ತಯಾರಿರಬೇಕು. ಮಾಹಿತಿ ತಂತ್ರಜ್ನಾನ ಯುಗದಲ್ಲಿ ಪ್ರಾದೇಶಿಕ ಯುದ್ಧವನ್ನು ಗೆಲ್ಲುವಷ್ಟು ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಈ ನಡುವೆ ಗಡಿಯಲ್ಲಿ ಚೀನಾದೊಂದಿಗೆ ಹೊಸ ಸಂಘರ್ಷವೇರ್ಪಟ್ಟ ಹಿನ್ನಲೆಯಲ್ಲಿ ನಾಲ್ಕು ದಿನಗಳ ಭೂತಾನ್ ಪ್ರವಾಸಕ್ಕೆ ತೆರಳಬೇಕಾಗಿದ್ದ ಭಾರತದ ಸೇನಾ ಮುಖ್ಯಸ್ಥ ಜ.ದಲ್ಬೀರ್ ಸಿಂಗ್ ಸುಹಾಗ್ ತಮ್ಮ ಪ್ರವಾಸ ರದ್ದುಗೊಳಿಸಿದ್ದಾರೆ.