ಬೆಂಗಳೂರು : ಹಿಂದೂ ಪದ ಭಾರತೀಯ ಶಬ್ಧವಲ್ಲ, ಮಹಮದೀಯರು ಭಾರತಕ್ಕೆ ಬಂದಾಗ ಬಂದಂತಹ ಶಬ್ಧ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಎಂ.ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮುರುಗಾ ಶರಣರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಹಿಂದೂ ಪದವಿಲ್ಲ, ವೇದ, ಉಪನಿಷತ್ ನಲ್ಲಿಯೂ ಹಿಂದೂ ಪದ ಬಳಕೆಯಿಲ್ಲ ಎಂದರು.
ಹಿಂದೂ ಪದ ಭಾರತೀಯ ಶಬ್ಧವಲ್ಲ. ಮಹಮದೀಯರು ಭಾರತಕ್ಕೆ ಬಂದಾಗ ಜನಾಂಗವನ್ನು ಪ್ರತ್ಯೇಕಿಸಲು ಹಿಂದೂ ಶಬ್ದ ಬಳಕೆ ಮಾಡಿದರು. ಇದರಿಂದ ಭಾರತೀಯರ ಸ್ವಾಭಿಮಾನಕ್ಕೆ ಅಪಾಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಿಂದೂ ಎಂದು ಬಳಸುವ ವ್ಯಕ್ತಿತ್ವ ಭಾರತೀಯರಿಗಿಲ್ಲ, ಇದು ಭಾಷೆ, ಸಂಸ್ಕೃತಿ ಇತಿಹಾಸದಲ್ಲಿ ಹುಟ್ಟಿದ ಅಪಶಬ್ಧ, ಅಪಶಬ್ಧವನ್ನು ಸರಿಯೆಂದು ಬಳಕೆ ಮಾಡಿಕೊಂಡರೆ ಅದು ದೊಡ್ಡ ತಪ್ಪು ಎಂದು ತಿಳಿಸಿದ್ದಾರೆ.
ಇದೇ ವೇಳೆ ಸಾಹಿತಿ ದೇ.ಜವರೇಗೌಡ ಅವರು, ಪುರೋಹಿತರು ಇರುವವರೆಗೂ ದೇಶದಲ್ಲಿ ಶಾಂತಿಯಿಲ್ಲ, ಬಸವಣ್ಣ ಹಾಗೂ ಕುವೆಂಪು ಕೂಡ ಹಿಂದೆ ಇದನ್ನೇ ಹೇಳಿದ್ದರು. ಪುರೋಹಿತಶಾಹಿಯಂತಹ ಕೆಟ್ಟ ಪದ್ಧತಿಯನ್ನು ಕಿತ್ತೊಗೆಯಬೇಕು ಎಂದು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಈ ಎರಡೂ ಹೇಳಿಕೆ ವಿವಾದವನ್ನು ಹುಟ್ಟುಹಾಕುವ ಸಾಧ್ಯತೆಯಿದೆ.