ಮುಂಬೈ : ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ- ಶಿವಸೇನೆಯ ಮೈತ್ರಿ ಭಂಗವಾಗುವ ಸಾಧ್ಯತೆಯಿದ್ದು, ಒಂದು ವೇಳೆ ಉಭಯ ಪಕ್ಷಗಳ ನ್ನಡುವೆ ಮೈತ್ರಿ ಮುರಿದುಬಿದ್ದರೆ ಪ್ಲಾನ್ ಬಿ ಯೊಂದಿಗೆ ಚುನಾವಣೆ ಎದುರಿಸಲು ಸಜ್ಜಾಗಿವೆ.
ಸ್ಥಾನ ಹೊಂದಾಣಿಕೆ ಹಾಗೂ ಮುಖ್ಯಮಂತ್ರಿ ಹುದ್ದೆಯ ವಿಚಾರವಾಗಿ ಬಿಜೆಪಿ ಮತ್ತು ಶಿವಸೇನೆಯ ನಡುವಣ ಅಭಿಪ್ರಾಯ ಬೇಧಗಳು ಮುಂದುವರಿದಿರುವಂತೆಯೇ ಎರಡೂ ಪಕ್ಷಗಳು ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸಲು ಸಿದ್ಧತೆ ಆರಂಭಿಸಿವೆ.
ಬಿಜೆಪಿ, ಎಸ್ ಎಸ್ ಎಸ್, ಆರ್ ಎಸ್ ಪಿ ಮತ್ತು ಆರ್ ಪಿಐಗಳನ್ನು ಮಿತ್ರಪಕ್ಷಗಳನ್ನಾಗಿ ಹೊಂದಿದ್ದು ರಾಜ್ ಠಾಕ್ರೆ ನೇತೃತ್ವದ ಎಂ ಎನ್ ಎಸ್ ನ್ನೂ ತನ್ನ ಕಕ್ಷೆಯೊಳಗೆ ಸೇರಿಸಿಕೊಳ್ಳುವ ಹವಣಿಕೆಯಲ್ಲಿದೆ. ಒಂದು ವೇಳೆ ಶಿವಸೇನೆಯೊಂದಿಗಿನ ಮೈತ್ರಿ ಮುರಿದುಬಿದ್ದಲ್ಲಿ ಎಂ ಎನ್ ಎಸ್ ನೊಂದಿಗೆ ಮೈತ್ರಿ ಬೆಳೆಸಲು ಬಿಜೆಪಿ ತೀರ್ಮಾನಿಸಿದೆ. ಇದೇ ವೇಳೆ ಶಿವಸೇನೆ ಕೂಡ ಪ್ಲಾನ್ ಬಿ ಯನ್ನು ಸಿದ್ಧಪಡಿಸಿದೆ.
ಈ ನಡುವೆ ಪ್ರತಿಕ್ರಿಯಿಸಿರುವ ಶಿವಸೇನೆ, ಉಪಚುನಾವಣೆಯ ಫಲಿತಾಂಶದಿಂದ ಬಿಜೆಪಿ ಪಾಠ ಕಲಿಯಬೇಕು. ಬಿಜೆಪಿಗರು ಇನ್ನಾದರೂ ತಮ್ಮ ಪಾದವನ್ನು ನೆಲದ ಮೇಲೆ ಊರಬೇಕು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತರ ಪ್ರದೇಶದಲ್ಲಿ ದೊಡ್ಡ ಸಾಧನೆ ಮಾಡಿತ್ತು. ಆದರೆ ಉಪಚುನಾವಣೆಯಲ್ಲಿ ಫಲಿತಾಂಶ ತದ್ವಿರುದ್ಧವಾಗಿದೆ. ಮಹಾರಾಷ್ಟ್ರ ಚುನಾವಣೆಗೂ ಇದೊಂದು ಪಾಠ, ಏನು ಮಾಡಿದರೂ ಜನ ಒಪ್ಪುತ್ತಾರೆ ಎಂದುಕೊಳ್ಳಬೇಡಿ. ಜನರ ಮನಸ್ಸು ಚಂಚಲವಾಗಿದೆ ಎಂದು ಕಿವಿಮಾತು ಹೇಳಿದೆ.