ನವದೆಹಲಿ : ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್ ನಲ್ಲಿ ನಡೆದ ಉಪಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಕಡಿಮೆ ಸ್ಥಾನ ದೊರೆತಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಎನ್.ಡಿ.ಎ ಮೈತ್ರಿ ಪಕ್ಷ ಶಿವಸೇನೆ,ಉಪಚುನಾವಣೆ ಫಲಿತಾಂಶದಿಂದ ಬಿಜೆಪಿ ಪಾಠ ಕಲಿಯಬೇಕು ಎಂದು ಎಚ್ಚರಿಸಿದೆ.
ಮುಂಬೈ ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಸನಿಹದಲ್ಲೇ ಬಿಜೆಪಿಗೆ ಸೋಲು ಬರಸಿಡಿಲಿನಂತೆ ಅಪ್ಪಳಿಸಿದೆ. ಅಲ್ಲದೇ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ನಡುವೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಉಂಟಾಗಿದ್ದು ಸೀಟು ಹಂಚಿಕೆಯಲ್ಲಿ ಸಿಂಹಪಾಲು ಕೇಳುತ್ತಿರುವ ಬಿಜೆಪಿಗೆ ಶಿವಸೇನೆ ಎಚ್ಚರಿಕೆಯ ಪಾಠ ಹೇಳಲು ಆರಂಭಿಸಿದೆ.
ಇದೇ ವೇಳೆ ಎನ್.ಡಿ.ಎ ಸರ್ಕಾರವನ್ನು ಸಮರ್ಥಿಸಿಕೊಂಡಿರುವ ಶಿವಸೇನೆ ಮುಖಂಡರೊಬ್ಬರು, ಪ್ರಸಕ್ತ ಚುನಾವಣೆಯ ಫಲಿತಾಂಶ ನರೇಂದ್ರ ಮೋದಿ ಸರ್ಕಾರದ ಕೈಖರಿಗೆ ದೊರೆತಿರುವ ಪ್ರತಿಕ್ರಿಯೆ ಅಲ್ಲ ಎಂದು ಹೇಳಿದ್ದಾರೆ. ಆದರೆ ಖಂಡಿತವಾಗಿ ಬಿಜೆಪಿ ಇದರಿಂದ ಪಾಠ ಕಲಿಯಬೇಕು ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ ಚುನಾವಣಾ ಫಲಿತಾಂಶದ ನಂತರವೂ ಬಿಜೆಪಿ ಮಹಾರಾಷ್ಟ್ರದಲ್ಲಿ 135 ಸೀಟುಗಳನ್ನು ಕೇಳಲು ಸಾಧ್ಯವೇ ಎಂದು ಮತ್ತೋರ್ವ ಶಿವಸೇನೆ ಮುಖಂಡ ಪ್ರಶ್ನಿಸಿದ್ದಾರೆ.
ಸೆ.13ರಂದು ನಡೆದ 3 ಲೋಕಸಭೆ ಮತ್ತು 33 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಗುಜರಾತ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ತೆರವಾದ ವಡೋದರಾದಲ್ಲಿ ಬಿಜೆಪಿ ಅಭ್ಯರ್ಥಿ ರಂಜನ್ ಬೇನ್ ಭಟ್ಟ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಆದರೆ ಗುಜರಾತ್ ನ ಒಟ್ಟು 9 ವಿಧಾನಸಭಾ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ಒಂಬತ್ತರಲ್ಲಿ ಆರು ಸ್ಥಾನಗಳಲ್ಲಿ ತನ್ನದಾಗಿಸಿಕೊಂಡಿರುವ ಬಿಜೆಪಿ, ಉಳಿದ ಮೂರು ಸ್ಥಾನಗಳನ್ನು ಕಾಂಗ್ರೆಸ್ ಗೆ ಬಿಟ್ಟುಕೊಟ್ಟಿದೆ.