ಬೆಂಗಳೂರು : ಮಾಜಿ ಸಿ.ಎಂ ಜಗದೀಶ್ ಶೆಟ್ಟರ್ ಅವರ ವಿರುದ್ಧ ಭೂ ಹಗರಣದ ಆರೋಪ ಮಾಡಿರುವ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಾಹಂ, ಹಗರಣದ ಸಂಬಂಧ ತನಿಖೆ ನಡೆಸದಿದ್ದರೆ ಹಾಲಿ ಸಿ.ಎಂ ಸಿದ್ದರಾಮಯ್ಯ ಅವರ ವಿರುದ್ಧವೂ ದೂರು ದಾಖಲಿಸಿ ಲೋಕಾಯುಕ್ತರ ಮೊರೆ ಹೋಗುವುದಾಗಿ ಎಚ್ಚರಿಸಿದ್ದಾರೆ.
ಜಗದೀಶ್ ಶೆಟ್ಟರ್ ವಿರುದ್ಧ ಕೇಳಿಬಂದಿರುವ ಭೂ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಟಿ.ಜೆ ಅಬ್ರಾಹಂ, ಒಂದು ವೇಳೆ ಮುಖ್ಯಮಂತ್ರಿಗಳು ತನಿಖೆ ನಡೆಸದೇ ಇದ್ದಲ್ಲಿ ಅವರ ವಿರುದ್ಧವೂ ಲೋಕಾಯುಕ್ತಕ್ಕೆ ದೂರು ನೀಡುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಜಗದೀಶ್ ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿರುವ ಟಿ.ಜೆ ಅಬ್ರಾಹಂ, ಮುಖ್ಯಮಂತ್ರಿಯಾಗಿದ್ದ ವೇಳೆ ಯೂನಿಯನ್ ಬ್ಯಾಂಕ್ ಗೆ ತೀರಿಸಿದ ಸಾಲ ಯಾರದ್ದು ಎಂದು ಶೆಟ್ಟರ್ ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಸರ್ಕಾರ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ಹಣ ಸಂದಾಯ ಮಾಡಿದ್ದೇಕೆ?, ಬ್ಯಾಂಕಿನಲ್ಲಿ ಮಠದ ಆಸ್ತಿ ಮೇಲೆ ಸಾಲ ಪಡೆಯಲಾಗಿತ್ತೆ? ಯಾರ ಸಾಲ ತೀರಿಸಲು ಬ್ಯಾಂಕಿಗೆ ಹಣ ನೀಡಲಾಯಿತು ಎಂಬುದರ ಬಗ್ಗೆ ಶೆಟ್ಟರ್ ಸಮರ್ಕಪ ದಾಖಲೆ ಒದಗಿಸಲಿ. ಇಲ್ಲವಾದರೆ ಲೋಕಾಯುಕ್ತ ಮೊರೆ ಹೋಗುವುದಾಗಿ ಟಿ.ಜೆ ಅಬ್ರಾಹಂ ಎಚ್ಚರಿಸಿದ್ದಾರೆ.