ಬೆಂಗಳೂರು : ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಹುಕೋಟಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಂ ಗಂಭೀರ ಆರೋಪ ಮಾಡಿದ್ದಾರೆ.
ಸೆ.15ರಂದು ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಬ್ರಾಹಂ, ಗಾಂಧಿ ನಗರದಲ್ಲಿರುವ ಮುರುಘಾ ಮಠಕ್ಕೆ ಅನುಕೂಲ ಮಾಡಲು ಶೆಟ್ಟರ್ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಮುರುಘಾ ಮಠ ಪಾವತಿಸಬೇಕಿದ್ದ 34.36 ಕೋಟಿ ರೂಪಾಯಿ ಸಾಲವನ್ನು ಸರ್ಕಾರವೇ ಪಾವತಿಸಿರುವುದೂ ಅಲ್ಲದೇ ಮುರುಘಾಶರಣರ ಹೆಸರಿಗೆ 29.29 ಕೋಟಿ ರೂಪಾಯಿಗಳನ್ನು ಪಾವತಿಸಿದ್ದಾರೆ. ಅಲ್ಲದೇ ವಿವಾದಿತ ಭೂಮಿಯನ್ನು ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರ ಖರೀದಿಸಿತ್ತು ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ 63.65 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಬ್ರಹಂ ಆರೋಪಿಸಿದ್ದಾರೆ.
ಸರ್ಕಾರ, ಮಾಜಿ ಸಿ.ಎಂ ಜಗದೀಶ್ ಶೆಟ್ಟರ್ ಅವರು ನಡೆಸಿರುವ ಅಕ್ರಮದ ಸಂಬಂಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶೆಟ್ಟರ್, ಬಿಜೆಪಿ, ಸಿದ್ದರಾಮಯ್ಯ ಅವರ ಅರ್ಕಾವತಿ ಡಿನೋಟಿಫಿಕೇಶನ್ ಹಗರಣವನ್ನು ಬಯಲು ಮಾಡಲು ಮುಂದಾಗಿರುವುದರಿಂದ ಈ ರೀತಿ ತಮ್ಮ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ. ನನ್ನ ವಿರುದ್ಧದ ಆರೋಪ ಸುಳ್ಳು ಎಂದು ಹೇಳಿದ್ದಾರೆ.
ಆರೋಪದ ಬಗ್ಗೆ ತನಿಖೆ ನಡೆಸಿ ಅರೋಪ ಸಾಬೀತಾದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಟಿ.ಬಿ ಜಯಚಂದ್ರ ಭರವಸೆ ನೀಡಿದ್ದಾರೆ.