ನವದೆಹಲಿ : ಪಕ್ಷದ ಅಧಿಕೃತ ವಕ್ತಾರರನ್ನು ಬಿಟ್ಟು ಇತರರು ಮಾಧ್ಯಮಗಳಿಗೆ ಹೇಳಿಕೆ ನೀಡಬಾರದು ಎಂದು ಪಕ್ಷದ ಮುಖಂಡರಿಗೆ ಎಐಸಿಸಿ ಸೂಚನೆ ನೀಡಿದೆ.
ವರಿಷ್ಠರ ಈ ಸೂಚನೆಯನ್ನು ಪಕ್ಷದ ನಾಯಕರೇ ತಿರಸ್ಕರಿಸಿದ್ದು, ಮನೀಶ್ ತಿವಾರಿ ಮತ್ತು ರಶೀದ್ ಅಲ್ವಿ ನಿರಾಕರಿಸಿದ್ದಾರೆ.
ಪಕ್ಷದ ಪರವಾಗಿ ವಕ್ತಾರರು ಮಾತ್ರ ಅಧಿಕೃತವಾಗಿ ಮಾತನಾಡಬಹುದು. ವಕ್ತಾರರನ್ನು ಬಿಟ್ಟು ಉಳಿದ ಮುಖಂಡರು ಮಾಧ್ಯಮಗಳಿಗೆ ಮನಬಂದಂತೆ ಹೇಳಿಕೆಗಳನ್ನು ನೀಡಬಾರದು. ಯಾರೊಬ್ಬರನ್ನೂ ದೃಷ್ಟಿಯಲ್ಲಿಟ್ಟುಕೊಂಡು ಈ ಸೂಚನೆ ನೀಡಲಾಗಿಲ್ಲ. ಇದು ಕಟ್ಟಪ್ಪಣೆಯಲ್ಲ, ಮುಖಂಡರಿಗೆ ನೀಡುತ್ತಿರುವ ಸೂಚನೆ. ಎಂದು ಕಾಂಗ್ರೆಸ್ ವಕ್ತಾರ ಶಕೀಲ್ ಅಹಮದ್ ತಿಳಿಸಿದ್ದಾರೆ.
ಮನೀಶ್ ತಿವಾರಿ ಇತ್ತೀಚೆಗೆ ಕೇರಳ ರಾಜ್ಯಪಾಲರಾಗಿ ಸುಪ್ರೀಂ ಕೋರ್ಟ್ ಮಾಜಿ ಮುಖ್ಯನ್ಯಾಯಮೂರ್ತಿ ಪಿ.ಸದಾಶಿವಂ ನೇಮಕಮಾಡಿದ್ದನ್ನು ಸಮರ್ಥಿಸಿದ್ದರು. ಇದು ಕಾಂಗ್ರೆಸ್ ಗೆ ತೀವ್ರ ಮುಜುಗರವನ್ನುಂಟುಮಾಡಿತ್ತು.
ಪ್ರಧಾನಿ ನರೇಂದ್ರ ಮೋದಿ ಕೂಡ ವಕ್ತಾರರಷ್ಟೇ ಪಕ್ಷದ ಪರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಬೇಕು. ಅನ್ಯರು ನೀಡಬಾರದು ಎಂದು ಬಿಜೆಪಿ ನಾಯಕರಿಗೆ ಸೂಚಿಸಿದ್ದರು.