BW News Bureau : ’ನಮ್ಮ ಮೆಟ್ರೊ’ ಮೊದಲ ಹಂತದ ಸುರಂಗ ಕಾಮಗಾರಿಗಳನ್ನು 300 ದಿನಗಳೊಳಗೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ಮೆಟ್ರೊ ರೈಲು ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮೆಟ್ರೊ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತ ಈ ವಿಷಯ ತಿಳಿಸಿದರು. ಮೆಟ್ರೊ ಮೊದಲ ಹಂತದ ಯೋಜನೆಯಲ್ಲಿ 18 ಕಿ.ಮೀ. ಸುರಂಗ ಕೊರೆಯಬೇಕಾಗಿದೆ. ಬೃಹತ್ ಬಂಡೆಗಳು ಸಿಗುತ್ತಿರುವುದರಿಂದ ಸುರಂಗ ಕೊರೆಯುವ ಕೆಲಸಕ್ಕೆ ತೊಡಕಾಗುತ್ತಿದೆ; ನಿಧಾನವಾಗುತ್ತಿದೆ. ಆದ್ದರಿಂದ ಸುರಂಗ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮೆಟ್ರೊ ಮೊದಲ ಹಂತದ ಕಾಮಗಾರಿ ಸೆಪ್ಟೆಂಬರ್ 2015ಕ್ಕೆ ಪೂರ್ಣಗೊಳ್ಳಲಿದೆ. 42 ಕಿ.ಮೀ. ಉದ್ದದ ಕಾಮಗಾರಿಗೆ 13.5 ಸಾವಿರ ಕೋಟಿ ರೂ. ವೆಚ್ಚವಾಗಿದೆ. ಎರಡನೇ ಹಂತದ ಕಾಮಗಾರಿಯನ್ನು 26 ಸಾವಿರ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. 74 ಕಿ.ಮೀ. ಉದ್ದದ ಈ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ಸಿವಿಲ್ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಮಾಹಿತಿ ನೀಡಿದ ಮುಖ್ಯಮಂತ್ರಿಯವರು ಪೀಣ್ಯ- ನಾಗಸಂದ್ರ ನಡುವಣ ಸಂಚಾರ 2015ರ ಫೆಬ್ರುವರಿಯಲ್ಲಿ ಹಾಗೂ ಮಾಗಡಿ ರಸ್ತೆ- ನಾಯಂಡಹಳ್ಳಿ ನಡುವಣ ಸಂಚಾರ 2015ರ ಏಪ್ರಿಲ್ನಲ್ಲಿ ಆರಂಭವಾಗಲಿದೆ ಎಂದು ತಿಳಿಸಿದರು.
ತುಮಕೂರು ರಸ್ತೆಯ ನಾಗಸಂದ್ರ ನಿಲ್ದಾಣ, ವಿಜಯನಗರ, ಕೆ.ಆರ್. ರಸ್ತೆ ನ್ಯಾಷನಲ್ ಕಾಲೇಜು ನಿಲ್ದಾಣ ಹಾಗೂ ಸರ್ಕಾರಿ ಕಲಾ ಕಾಲೇಜು ಸಮೀಪದ ನೆಲಮಹಡಿಯಲ್ಲಿರುವ ನಿಲ್ದಾಣಗಳ ಕಾಮಗಾರಿಗಳನ್ನು ಪರಿಶೀಲಿಸಿದರು.