ಮುಂಬೈ : ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸ್ಥಾನ ಹಂಚಿಕೆ ವಿಚಾರದಲ್ಲಿ ಬಿಜೆಪಿ ಹಾಗೂ ಶಿವಸೇನೆ ನಡುವೆ ತೀವ್ರ ಜಟಾಪಟಿ ಏರ್ಪಟ್ಟಿದ್ದು, ಗೊಂದಲಗಳಿಗೆ ಕಾರಣವಾಗಿದೆ.
ಮಹಾರಾಷ್ಟ್ರದ 288 ಕ್ಷೇತ್ರಗಳಿಗೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಬಿಜೆಪಿಗೆ ಬಿಟ್ಟುಕೊಡಲು ಸಾಧ್ಯವಿಲ್ಲ, 155ಕ್ಕಿಂತಲೂ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸಲು ಶಿವಸೇನೆ ಒಪ್ಪುವುದಿಲ್ಲ ಎಂದು ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ಈ ನಡುವೆ ಮಾಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ವಿರುದ್ಧ ವಾಗ್ದಾಳಿ ನಡೆಸಿದ ಉದ್ಧವ್ ಠಾಕ್ರೆ, ಮಾಹಾರಾಷ್ಟ್ರ ಸಿಎಂ ಐಸಿಯು ರೋಗಿಯಿದ್ದಂತೆ ಎಂದು ಲೇವಡಿ ಮಾದಿದ್ದಾರೆ.
ಅವರು ಪಟ್ಟಕ್ಕೇರಿದಾಗ ರಾಜ್ಯದ ಬಗ್ಗೆ, ಗಡಿಗಳ ಬಗ್ಗೆಯೂ ತಿಳಿದಿರಲಿಲ್ಲ, ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ಅವರಿಂದ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕಾಗಿ ಶಿವಸೇನೆ ಹಾಗೂ ಬಿಜೆಪಿ ನಡುವೆ ಪೈಪೋಟಿ ಆರಂಭವಾಗಿದ್ದು, ಮುಖ್ಯಮಂತ್ರಿ ಸ್ಥಾನ ವಹಿಸಿಕೊಲ್ಳಲು ಸಿದ್ಧ ಎಂಬ ಉದ್ಧವ್ ಠಾಕ್ರೆ ಹೇಳಿಕೆಗೆ, ಬಿಜೆಪಿ ಮುಖಂಡ ರಾಜೀವ್ ಪ್ರತಾಪ್ ರೂಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿವಸೇನೆಯಿಂದ ಬಿಜೆಪಿ ಪರಸ್ಪರ ಗೌರರವನ್ನು ನಿರೀಕ್ಷಿಸುತ್ತದೆ. ಚುನಾವಣಾ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಸ್ಥಾನ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ಈ ನಡುವೆ ಮುಖ್ಯಮಂತ್ರಿ ಅಭ್ಯರ್ಥಿ ತಮ್ಮ ಪಕ್ಷದವರೇ ಆಗಬೇಕು ಎಂಬ ಶಿವಸೇನೆಯ ಸಂಜಯ್ ರಾವುತ್ ಹೇಳಿಕೆಗೆ, ಬಿಜೆಪಿ ನೇತೃತ್ವದಲ್ಲಿಯೇ ಮುಂದಿನ ಸರ್ಕಾರ ರಚನೆಯಾಗಲಿದೆ ಎಂದು ಬಿಜೆಪಿಯ ಮಾಧವ ಭಂಡಾರಿ ತಿಳಿಸಿದ್ದಾರೆ.