ನವದೆಹಲಿ : ಭಾರತ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಗೋಮಾಂಸ ರಫ್ತು ಮಾಡುತ್ತಿರುವುದರ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮನೇಕಾ ಗಾಂಧಿ, ಅಕ್ರಮ ಗೋಹತ್ಯೆಯಿಂದ ಬರುತ್ತಿರುವ ಲಾಭವನ್ನು ಉಗ್ರರ ಚಟುವಟಿಕೆಯ ಬೆಳವಣಿಗೆಗೆ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಭಾರತ, ಗೋಮಾಂಸವನ್ನು ಅತಿ ಹೆಚ್ಚು ರಫ್ತು ಮಾಡುತ್ತಿರುವ ರಾಷ್ಟ್ರವಾಗಿದ್ದು ಲೆದರ್ ಉತ್ಪಾದನೆಗಾಗಿ ಗೋವುಗಳನ್ನು ಕೊಲ್ಲಲಾಗುತ್ತಿದೆ ಎಂದು ಮನೇಕಾ ಗಾಂಧಿ ಹೇಳಿದ್ದಾರೆ.
ಅಕ್ರಮ ಗೋಮಾಂಸ ರಫ್ತು ಮಾಡುವುದರಿಂದ ಬರುತ್ತಿರುವ ಹಣ ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ ಎಂದು ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಸಲ್ಲಿಸಿರುವ ವರದಿಯನ್ನು ಆಧರಿಸಿ ಮನೇಕಾ ಗಾಂಧಿ ಹೇಳಿಕೆ ನೀಡಿದ್ದಾರೆ.
ವಯಸ್ಸಾದ ಗೋವುಗಳನ್ನು ಕೊಲ್ಲುವುದು ಮಾತ್ರವಲ್ಲದೇ, ಹಾಲು ನೀಡುವ ಗೋವುಗಳನ್ನೂ ಕೊಲ್ಲಲಾಗುತ್ತಿದೆ. ಗೋಹತ್ಯೆಗೆ ಉತ್ತೇಜನ ನೀಡುತ್ತಿರುವುದು ನಮಗೆ ಮಾರಕವಾಗಿ ಪರಿಣಮಿಸುತ್ತಿದೆ ಎಂದು ಮನೇಕಾ ಗಾಂಧಿ ಎಚ್ಚರಿಕೆ ನೀಡಿದ್ದಾರೆ.
ಭಾರತದಿಂದ ಬಾಂಗ್ಲಾ ದೇಶಕ್ಕೆ 160,000 ಟನ್ ಗೋಮಾಂಸ ರಫ್ತು ಮಾಡಲಾಗುತ್ತಿದೆ ಎಂಬ ಅಘಾತಕಾರಿ ಅಂಶವನ್ನೂ ಮನೇಕಾ ಗಾಂಧಿ ಬಹಿರಂಗಪಡಿಸಿದ್ದಾರೆ.