ನವದೆಹಲಿ : ಜನರ ದೃಷ್ಟಿಯಲ್ಲಿ ತಾವು ಉತ್ತಮ ಕೆಲಸಗಳನ್ನು ಮಾಡುತ್ತಿರುವಂತೆ ತೋರಿಸಿಕೊಳ್ಳುವುದಕ್ಕಾಗಿ ಸಚಿವರೊಬ್ಬರು ತಮ್ಮ ನಿಕಟ ಪತ್ರಕರ್ತರಿಗೆ ದುಬಾರಿ ಉಡುಗೊರೆ ನೀಡಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ಬಂದಿದ್ದು, ಈ ಸಂಬಂಧ ನಡೆದ ಸಚಿವ ಸಂಪುಟ ಸಭೆಯಲ್ಲಿ ಉಡುಗೊರೆ ನೀಡಿದ ಸಚಿವರಿಗೆ ಅವರು ಚೀಮಾರಿ ಹಾಕಿದ್ದಾರೆ.
ನರೇಂದ್ರ ಮೋದಿ ಆಪ್ತ ಸಚಿವ ವಲಯದಲ್ಲಿ ಗುರುತಿಸಿಕೊಂಡಿದ್ದ ಪ್ರಮುಖ ಖಾತೆಯ ಸಚಿವರೊಬ್ಬರನ್ನು ಇತರೆ ಸಚಿವರ ಸಮ್ಮುಖದಲ್ಲೇ ನರೇಂದ್ರ ಮೋದಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಇಂತಹ ಘಟನೆಗಳು ಮತ್ತೊಮ್ಮೆ ಪುನರಾವರ್ತನೆಯಾದರೆ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಉಡುಗೊರೆ ನೀಡಿದ್ದ ಸಚಿವರು ಮೋದಿ ಅವರಿಗೆ ಸಮಾಜಾಯಿಷಿ ನೀಡಲು ಮುಂದಾಗಿದ್ದರಾದರೂ, ಮೋದಿ ಸಚಿವರ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ. ಈ ಮೂಲಕ ಇತರ ಸಚಿವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.