ಜಮ್ಮು-ಕಾಶ್ಮೀರ : ಪ್ರವಾಹ ಪೀಡಿತ ಜಮ್ಮು-ಕಾಶ್ಮೀರದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಕೆಲ ಕಿಡಿಗೇಡಿಗಳು ಅಡ್ಡಿ ಪಡಿಸಿದ್ದರಿಂದ ಸೇನಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ.
ಸೈನಿಕರ ಮೇಲೆ ಕಲ್ಲು ತೂರಾಟ ಮಾಡುವ ಮೂಲಕ ಪ್ರವಾಹ ಪೀಡಿತ ಪ್ರದೇಶದಲ್ಲಿ ಸೇನಾ ಸಿಬ್ಬಂದಿ ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆಗೆ ಕಾಶ್ಮೀರದ ಪ್ರತ್ಯೇಕವಾದಿಗಳು ಅಡ್ಡಿ ಪಡಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸೇನಾ ಕಾರ್ಯಾಚರಣೆಗೆ ಅಡ್ಡಿ ಮಾಡದಂತೆ ಸ್ಥಳೀಯ ಪೊಲೀಸರನ್ನು ಹಾಗೂ ಅರೆಸೇನಾ ಪಡೆಯನ್ನು ನಿಯೋಜಿಸುವಂತೆ ಓಮರ್ ಅಬ್ದುಲ್ಲಾ ಸರ್ಕಾರಕ್ಕೆ ಸೇನಾ ಪಡೆ ಮನವಿ ಮಾಡಿತ್ತು. ಆದರೆ ಲಾಲ್ ಚೌನ್ ಪ್ರದೇಶದಲ್ಲಿ ಪ್ರತ್ಯೇಕವಾದಿಗಳ ಕಲ್ಲು ತೂರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಸೇನಾ ಸಿಬ್ಬಂದಿಗಳು ಗುಂಡು ಹಾರಿಸಿದ್ದಾರೆ.
ಪ್ರವಾಹದಲ್ಲಿ ಸಾವಿರಾರು ಜನರು ಸಿಲುಕಿ ಒದ್ದಾಡುತ್ತಿದ್ದಾರೆ. ಆದರೆ ಪ್ರತ್ಯೇಕವಾದಿಗಳು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಪಡಿಸುವ ಮೂಲಕ ಜೀವಗಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಸೈನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.