ಶ್ರೀನಗರ : ಕಣಿವೆ ರಾಜ್ಯ ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ ಆರಂಭವಾಗಿದ್ದು, ದಕ್ಷಿಣ ಕಾಶ್ಮೀರದಲ್ಲಿ ಸೇನಾ ಪಡೆ ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ಅನಂತ್ನಾಗ್ ಜಿಲ್ಲೆಯ ಬೊಟೆಂಗೋ ಪ್ರದೇಶದಲ್ಲಿ ಪ್ರತಿಭಟನಾಕಾರರು ಸೇನಾಪದೆ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ರಕ್ಷನಾ ಪಡೆಗಳು ಪೆಲ್ಲೆಟ್ ಗನ್ ಪ್ರಯೋಗಿಸಿದ್ದಾರೆ. ಈ ವೇಳೆ ಪೆಲ್ಲೆಟ್ ಗನ್ ತಗುಲಿ ಓರ್ವ ಯುವಕ ಸಾವನ್ನಪ್ಪಿದ್ದಾನೆ. ಯುವಕನನ್ನು ಯಾವಾರ್ ಭಟ್ ಎಂದು ಗುರುತಿಸಲಾಗಿದೆ.
ಇದೇ ವೇಳೆ ಶೋಪಿಯಾನ್ ನಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಕಲ್ಲುತೂರಾಟ ಘಟನೆ ನಡೆದಿದ್ದು, ಉದ್ರಿಕ್ತರನ್ನು ಚದುರಿಸಲು ಸೇನಾ ಸಿಬ್ಬಂದಿಗಳು ಅಶ್ರುವಾಯು ಪ್ರಯೋಗಿಸಿದ್ದಾರೆ. ಈ ವೇಳೆ 25 ವರ್ಷದ ಸಾಯರ್ ಅಹ್ಮದ್ ಶೇಖ್ ಎಂಬಾತ ಮೃತಪಟ್ಟಿದ್ದಾನೆ.
ಅಶ್ರುವಾಯು ಹೊಗೆಯಿಂದಾಗಿ ಅಸ್ವಸ್ಥನಾಗಿದ್ದ ಶೇಖ್ ನನ್ನು ಕೂಡಲೇ ಆಸ್ಪತ್ರೆಗೆ ದಾಖಲಾಯಿಸಲಾಯಿತಾದರೂ, ಅಷ್ಟು ಹೊತ್ತಿಗಾಗಲೇ ಆತ ಸಾವನ್ನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದಾರೆ.
ಉಗ್ರ ಬುರ್ಹಾನ್ ವನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಬುಗಿಲೆದ್ದಿದ್ದ ಹಿಂಸಾಚಾರ ಉಗ್ರಸ್ವರೂಪ ಪಡೆದ ಹಿನ್ನಲೆಯಲ್ಲಿ 50ಕ್ಕೂ ಹೆಚ್ಚು ದಿನಗಳ ಕಾಲ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಇನ್ನೇನು ಪರಿಸ್ಥಿತಿ ತಿಳಿಯಾಗುತ್ತಿದೆ ಎನ್ನುವಾಗಲೇ ಕಣಿವೆ ರಾಜ್ಯದಲ್ಲಿ ಮತ್ತೆ ಹಿಂಸಾಚಾರ ಆರಂಭವಾಗಿದ್ದು, ಕಾಶ್ಮೀರ ಗಲಭೆಯಲ್ಲಿ ಈ ವರೆಗೆ ಸಾವಿಗಿಡಾದವರ ಸಂಖ್ಯೆ 75ಕ್ಕೇರಿದೆ.