ಜಬಲ್ ಪುರ : 'ಸಾಯಿ ಬಾಬಾ' ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ದ್ವಾರಕಾ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಮತ್ತೊಂದು ಹೇಳಿಕೆ ನೀಡಿದ್ದು ದೇಶಾದ್ಯಂತ ಇರುವ ಸಾಯಿ ಬಾಬಾ ದೇವಾಲಯಗಳಿಗೆ ವಿದೇಶದಿಂದ ಬರುತ್ತಿರುವ ದೇಣಿಗೆ ಬಗ್ಗೆ ತನಿಖೆ ನಡೆಸಬೇಕೆಂದು ಹೇಳಿದ್ದಾರೆ.
ಸನಾತನ ಧರ್ಮವನ್ನು ವಿರೂಪಗೊಳಿಸುವುದಕ್ಕಾಗಿ ಸಾಯಿ ಭಕ್ತರಿಗೆ ವಿದೇಶಗಳಿಂದ ಸಂದಾಯವಾಗುತ್ತಿರುವ ಹಣದ ಮೂಲ ಹಾಗೂ ಅವರ ದೂರವಾಣಿ ಕರೆ ಮಾಹಿತಿ ಬಗ್ಗೆ ಕೇಂದ್ರ ಗೃಹ ಸಚಿವಾಲಯ ತನಿಖೆ ನಡೆಸಬೇಕೆಂದು ಸ್ವರೂಪಾನಂದ ಸರಸ್ವತಿಗಳು ಆಗ್ರಹಿಸಿದ್ದಾರೆ.
ಇತ್ತೀಚೆಗಷ್ಟೇ ಚತ್ತೀಸ್ ಗಢದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಸನಾತನ ಧರ್ಮದ ಅನುಯಾಯಿಗಳು ಶಿರಡಿ ಸಾಯಿಬಾಬಾ ಅವರನ್ನು ಪೂಜಿಸಬಾರದು ಎಂದು ನಿರ್ಣಯ ಕೈಗೊಳ್ಳಲಾಗಿತ್ತು. ಅಲ್ಲದೇ ಶಿರಡಿ ಸಾಯಿ ವಿಗ್ರಹವನ್ನು ಪೂಜಿಸಬಾರದೆಂದು ಯಾರ ಮೇಲೂ ಒತ್ತಡ ಹಾಕುತ್ತಿಲ್ಲ ನಿಜವಾದ ಸನಾತನ ಧರ್ಮದ ಅನುಯಾಯಿಗಳು ಶಿರಡಿ ಸಾಯಿ ವಿಗ್ರಹವನ್ನು ಪೂಜಿಸುವುದಿಲ್ಲ. ಇದಕ್ಕೆ ಪೂರಕವೆಂಬಂತೆ ಹಲವು ದೇವಲಾಯಗಳಲ್ಲಿ ಸ್ವಯಂ ಪ್ರೇರಣೆಯಿಂದ ಶಿರಡಿ ಸಾಯಿ ವಿಗ್ರಹಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಸ್ವರೂಪಾನಂದ ಸರಸ್ವತಿ ಸ್ವಾಮೀಜಿಗಳು ಹೇಳಿದ್ದರು.
ಇದೇ ವೇಳೆ ನರೇಂದ್ರ ಮೋದಿ ಸರ್ಕಾರದ 100 ದಿನಗಳ ಬಗ್ಗೆಯೂ ಪ್ರಸ್ತಾಪಿಸಿದ್ದ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ, ಮೋದಿಗೆ ಸಂಪೂರ್ಣ ಬಹುಮತ ದೊರೆತಿದ್ದು ದೇಶದ ಜನತೆಯ ನಿರೀಕ್ಷೆಗಳನ್ನು ಪೂರ್ಣಗೊಳಿಸಲಿ ಎಂದಿದ್ದರು. ಮೋದಿ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ತೆಗೆದುಹಾಕಬೇಕು. ರಾಮಜನ್ಮಭೂಮಿ, ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಬೇಕಿದೆ ಎಂದು ಅವರು ಸಲಹೆ ನೀಡಿದ್ದಾರೆ.