ರಾಯ್ ಪುರ : ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸ್ ಗಢದ ನಕ್ಸಲ್ ಪೀಡಿತ ಪ್ರದೇಶ ದಾಂತೇವಾಡಾ ಜಿಲ್ಲೆಗೆ ಭೇಟಿ ನೀಡಿರುವ ಬೆನ್ನಲ್ಲೇ ನಕ್ಸಲರ ಗುಂಪೊಂದು ಸುಕ್ಮಾ ಜಿಲ್ಲೆಯ ಮರೆಂಗಾ ಗ್ರಾಮದ ಸುಮಾರು 300ಕ್ಕೂ ಅಧಿಕ ಗ್ರಾಮಸ್ಥರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡ ಘಟನೆ ನಡೆದಿದೆ.
ದಾಂತೇವಾಡಾದಲ್ಲಿ ನಾನಾ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಹಿನ್ನೆಲೆಯಲ್ಲಿ ಮೋದಿ ಭೇಟಿ ಕಾರ್ಯಕ್ರಮ ನಿಗದಿಯಾಗಿತ್ತು. ಏತನ್ಮಧ್ಯೆ ಶುಕ್ರವಾರ ರಾತ್ರಿಯೇ ಸುಕ್ಮಾ ಗ್ರಾಮಕ್ಕೆ 600ಕ್ಕೂ ಅಧಿಕ ನಕ್ಸಲೀಯರು ಆಗಮಿಸಿ, ಮೋದಿ ಕಾರ್ಯಕ್ರಮಕ್ಕೆ ತೆರಳದಂತೆ 300ಕ್ಕೂ ಅಧಿಕ ಗ್ರಾಮಸ್ಥರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವುದಾಗಿ ತಿಳಿದುಬಂದಿದೆ. ಸೋಂಪಾಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಈ ನಡುವೆ ಛತ್ತೀಸ್ ಗಢದ ಕಿರಂದೂಲ್ ಗ್ರಾಮದಲ್ಲಿ ನಕ್ಸಲರು ಅಟ್ಟಹಾಸ ಮುಂದುವರೆಸಿದ್ದು, ರೈಲ್ವೆ ಹಳಿಯನ್ನು ಸ್ಫೋಟಿಸಿದ್ದಾರೆ. ಕಿರಂದೂರ್ ಬಳಿ ೫ ಕಿ.ಮೀ ದೂರದ ರೈಲ್ವೆ ಮಾರ್ಗವನ್ನು ಸ್ಫೋಟಿಸಲಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಇನ್ನು ಸಂಜೆ ಪ್ರಧಾನಿ ಮೋದಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಈ ಮಧ್ಯೆ ಇಲ್ಲಿನ ಬರ್ಧ್ವಾನ್ ನ ಮನೆಯೊಂದರಲ್ಲಿ ಬಾಂಬ್ ಸ್ಫೋಟ ನಡೆದಿದೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.