ರಾಯ್ ಪುರ : ಛತ್ತೀಸ್ ಗಢದ ದಾಂತೇವಾಡ ಜಿಲ್ಲೆಯ ಗ್ರಾಮವೊಂದರಲ್ಲಿ ನಕ್ಸಲರು ಅಪಹರಿಸಿದ್ದ ಗ್ರಾಮಸ್ಥರನ್ನು ರಾತ್ರಿ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ನಕ್ಸಲರ ಭದ್ರಕೋಟೆಯಾಗಿರುವ ಛತ್ತೀಸ್ ಗಢದ ದಾಂತೇವಾಡ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುವ ಬೆನ್ನಲ್ಲಲ್ಲೇ ಮಹಿಳೆಯರು, ಮಕ್ಕಳು ಸೇರಿದಂತೆ 250 ಗ್ರಾಮಸ್ಥರನ್ನು ನಕ್ಸಲರು ಅಪಹರಿಸಿದ್ದರು. ಆದರೆ, ಶನಿವಾರ ರಾತ್ರಿ ನಕ್ಸಲೀಯರು "ಜನ ಅದಾಲತ್'ನಲ್ಲಿ ಓರ್ವನನ್ನು ಕೊಂದು ಉಳಿದ ಗ್ರಾಮಸ್ಥರನ್ನು ಬಿಡುಗಡೆ ಮಾಡಿದ್ದರೆ.
ದಂತೇವಾಡ ಜಿಲ್ಲೆಯ ಪಕ್ಕದಲ್ಲಿರುವ ಸುಕಾ¾ ಜಿಲ್ಲೆಯಲ್ಲಿ ಸೇತುವೆಯೊಂದರ ನಿರ್ಮಾಣ ವಿರೋಧಿಸಿ ನಕ್ಸಲರು ಶುಕ್ರವಾರ ರಾತ್ರಿ 200ರಿಂದ 250 ಗ್ರಾಮಸ್ಥರನ್ನು ಅಪಹರಿಸಿದ್ದರು. ಅವರನ್ನು ಬಿಡಿಸಿ ಕರೆ ತರಲು ನಾಲ್ಕರಿಂದ ಐವರು ಸ್ಥಳೀಯರು ಮಾತುಕತೆಯಲ್ಲಿ ನಿರತರಾಗಿದ್ದರು ಎಂದು ಛತ್ತೀಸ್ ಗಢ ಮುಖ್ಯಮಂತ್ರಿ ರಮಣಸಿಂಗ್ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ಹೇಳಿಕೆ ನೀಡುವ ಮುನ್ನ ಇಬ್ಬರು ಅಧಿಕಾರಿಗಳು ವೈರುಧ್ಯದ ಮಾತುಗಳನ್ನು ನೀಡಿದ್ದರು. ನಕ್ಸಲರು 400ರಿಂದ 500 ಗ್ರಾಮಸ್ಥರನ್ನು ಅರಣ್ಯಕ್ಕೆ ಕರೆದೊಯ್ದಿದ್ದಾರೆ ಎಂದು ಸುಕಾ¾ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ರಾಠೊಡ್ ಅವರು ತಿಳಿಸಿದ್ದರು. ಆದರೆ ಇದನ್ನು ಅಲ್ಲಗಳೆದಿದ್ದ ಬಸ್ತರ್ ವಲಯದ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಆರ್.ಪಿ. ಕಲ್ಲೂರಿ, 400ರಿಂದ 500 ಜನರನ್ನು ನಕ್ಸಲರು ಕರೆದೊಯ್ದಿರುವುದು ಮಾಧ್ಯಮಗಳು ಸೃಷ್ಟಿಸಿರುವ ಕಟ್ಟು ಕತೆ. ಐದಾರು ಜನರನ್ನಷ್ಟೇ ಅರಣ್ಯದೊಳಕ್ಕೆ ಕರೆದೊಯ್ದಿದ್ದಾರೆ. ಇಂತಹ ಘಟನೆ ಸರ್ವೇ ಸಾಮಾನ್ಯ. ಗ್ರಾಮಸ್ಥರೇ ಕಾಡಿನೊಳಕ್ಕೆ ಹೋಗಿ ನಕ್ಸಲರ ಜತೆ ಮಾತುಕತೆ ನಡೆಸಿ ಹಳ್ಳಿ ಜನರನ್ನು ಬಿಡಿಸಿಕೊಂಡು ಬರುತ್ತಾರೆ ಎಂದು ತಿಳಿಸಿದ್ದರು.
ಮೇ 9ರಂದು ಪ್ರಧಾನಿ ನರೇಂದ್ರ ಮೋದಿ ಛತ್ತೀಸ್ ಗಢ ಪ್ರವಾಸ ಕೈಗೊಂಡಿದ್ದರು. ಮೋದಿ ಭೇಟಿ ವಿರೋಧಿಸಿ ನಕ್ಸಲರು ಕಿರಾಂದುಲ್- ವಿಶಾಖಪಟ್ಟಣ ಮಾರ್ಗದ ರೈಲು ಹಳಿಯನ್ನು ಧ್ವಂಸಗೊಳಿಸಿದ್ದರು, ಅಲ್ಲದೇ ಮರದ ದಿಮ್ಮಿಗಳನ್ನು ಕೆಡವಿ ಹಲವು ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದ್ದರು.