ನವದೆಹಲಿ : 'ಹಿಂದೂ ವಿವಾಹ ಕಾಯ್ದೆ'ಯಲ್ಲಿ ಬದಲಾವಣೆ ಮಾಡಬೇಕು ಎಂದು ದ್ವಾರಕಾ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ. ಮಕ್ಕಳಿಲ್ಲದ ಹಿಂದೂಗಳು ಎರಡನೇ ವಿವಾಹವಾಗಲು ಅನುಮತಿ ನೀಡಬೇಕೆಂದು ಹೇಳಿದ್ದಾರೆ.
ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ನೀಡಿರುವ ಹೇಳಿಕೆ ಬಗ್ಗೆ ಮಾಧ್ಯಮಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಸ್ವರೂಪಾನಂದ ಸ್ವಾಮಿಗಳು ಇತ್ತೀಚೆಗಷ್ಟೇ ಸಾಯಿ ಬಾಬಾ ದೇವರೂ ಅಲ್ಲ ಗುರುವೂ ಅಲ್ಲ ಎಂದು ಹೇಳಿಕೆ ನೀಡಿ ವಿವಾದ ಸೃಷ್ಠಿಸಿದ್ದರು. ಮಕ್ಕಳಿಲ್ಲದ ಹಿಂದೂಗಳು 2ನೇ ಮದುವೆಯಾಗಲು ಅವಕಾಶ ನೀಡುವ ನಿಟ್ಟಿನಲ್ಲಿ ಇದೀಗ ಹಿಂದೂ ವಿವಾಹ ಕಾಯ್ದೆಗೆ ಬದಲಾವಣೆ ತರಬೇಕು ಎಂದು ಹೇಳಿದ್ದಾರೆ.
ಕುಸಿಯುತ್ತಿರುವ ಹಿಂದೂಗಳ ಜನಸಂಖ್ಯೆ ವೃದ್ಧಿಸಲು ಪ್ರತಿಕುಟುಂಬ 5 ಮಕ್ಕಳನ್ನು ಹೊಂದಿರಬೇಕು ಎಂದು ವಿಶ್ವ ಹಿಂದೂ ಪರಿಷತ್ ನ ಮುಖಂಡ ಅಶೋಕ್ ಸಿಂಘಾಲ್ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ದ್ವಾರಕಾ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಈ ಹೇಳಿಕೆಯಿಂದ ಅಲ್ಪಸಂಖ್ಯತ ಕಾನೂನು ಮುಸ್ಲಿಮರಿಗೆ ಒಂದಕ್ಕಿಂತಲೂ ಹೆಚ್ಚು ಮದುವೆಯಾಗಲು ನೀಡಿರುವ ಅವಕಾಶದ ಬಗ್ಗೆಯೂ ಚರ್ಚೆ ನಡೆಯುವಂತಾಗಿದೆ.