ನವದೆಹಲಿ : 'ಜಮ್ಮು-ಕಾಶ್ಮೀರ'ದಲ್ಲಿ ಉಂಟಾಗಿದ್ದ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ 40 ಕನ್ನಡಿಗರನ್ನು ರಕ್ಷಿಸಲಾಗಿದ್ದು ದೆಹಲಿ ಭವನಕ್ಕೆ ಸುರಕ್ಷಿತವಾಗಿ ತಲುಪಿಸಲಾಗಿದೆ.
ಕಣಿವೆ ರಾಜ್ಯದಲ್ಲಿ ಮಳೆ ನಿಂತಿದ್ದರೂ ಪ್ರವಾಹ ಸ್ಥಿತಿ ಮುಂದುವರೆದಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನಾ ಪಡೆ ನಿರತವಾಗಿದೆ. ಪ್ರವಾಹದಲ್ಲಿ ರಾಜ್ಯದ 640 ಪ್ರವಾಸಿಗರು ಸಿಲುಕಿಕೊಂಡಿದ್ದು ಈಗಾಗಲೇ 200ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಇವರಲ್ಲಿ ಕೆಲವರು ಬೆಂಗಳೂರು ತಲುಪಿದ್ದಾರೆ.
ರಾಜ್ಯದ ಪ್ರವಾಸಿಗರ ನೆರವಿಗೆ ಐ.ಎ.ಎಸ್ ಅಧಿಕಾರಿ ರಮಣದೀಪ್ ಚೌಧರಿ ನೇತೃತ್ವದ ಅಧಿಕಾರಿಗಳ ತಂಡ ಶ್ರೀನಗರದಲ್ಲಿ ಬೀಡುಬಿಟ್ಟಿದೆ. ಅಲ್ಲದೇ ಜಮ್ಮು-ಕಾಶ್ಮೀರದಿಂದ ಬೆಂಗಳೂರಿಗೆ ಹಿಂದಿರುಗುವವರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅವರ ಮನೆಗೆ ಕರೆದೊಯ್ಯಲು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ದೆಹಲಿಯಿಂದ ಬೆಂಗಳೂರಿಗೆ ಬರಲು ನೆರವು ಬೇಕಿದ್ದರೆ ಕರ್ನಾಟಕ ಭವನದಲ್ಲಿರುವ ಅಧಿಕಾರಿಗಳಾದ ಸುಪ್ರಸನ್ನ(9868393971) ಅವರನ್ನು ಸಂಪರ್ಕಿಸಬಹುದಾಗಿದೆ.
ದೆಹಲಿ ಕರ್ನಾಟಕ ಭವದಲ್ಲಿ ಆಶ್ರಯ ಪಡೆದಿರುವ ಕನ್ನಡಿಗರು ಶೀಘ್ರವೇ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ವಿಪತ್ತು ನಿರ್ವಹಣಾ ಘಟಕ ಮಾಹಿತಿ ನೀಡಿದೆ.