ಗಾಜಿಯಾಬಾದ್ : ದೆಹಲಿಯಲ್ಲಿ ಸರ್ಕಾರ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಸೆ.10ರಂದು ಲೆಫ್ಟಿನೆಂಟ್ ಗವರ್ನರ್ ನಜೀಮ್ ಜಂಗ್ ಅವರನ್ನು ಭೇಟಿ ಮಾಡುವುದಾಗಿ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಗಾಜಿಯಾಬಾದ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೆಹಲಿಯಲ್ಲಿ ಸರ್ಕಾರ ರಚಿಸಲು ಬಿಜೆಪಿ ಕಸರತ್ತು ನಡೆಸಿದ್ದು, ಎ.ಎ.ಪಿ ಶಾಸಕರ ಖರೀದಿಗೆ ಆಮಿಷವೊಡ್ಡಲಾಗುತ್ತಿದೆ. ದೆಹಲಿ ವಿಧಾನಸಭೆಗೆ ಮರು ಚುನಾವಣೆ ನಡೆಸುವುದು ಸೂಕ್ತ ಎಂದು ಆಗ್ರಹಿಸಿದರು.
ಬಿಜೆಪಿ ಆಮಿಷವೊಡ್ಡಿರುವ ಬಗ್ಎಗಿನ ಸ್ಟಿಂಗ್ ಆಪರೇಷನ್ ವಿಡಿಯೋವನ್ನು ಲೆಫ್ಟಿನೆಂಟ್ ಗವರ್ನರ್ ಗೆ ನೀಡುತ್ತೇವೆ. ಬಿಜೆಪಿ ಇತರ ಪಕ್ಷಗಳ ಶಾಸಕರನ್ನು ಸೆಳೆದು ಸರ್ಕಾರ ರಚನೆಗೆ ಅವಕಾಶ ನೀಡಬಾರದೆಂದು ಮನವಿ ಮಾಡುವುದಾಗಿ ತಿಳಿಸಿದರು.
ಅಲ್ಲದೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಕೂಡ ಭೇಟಿಯಾಗಿ ಸ್ಟಿಂಗ್ ಆಪರೇಷನ್ ವಿಡಿಯೋ ನೀಡುವುದಾಗಿ ಕೇಜ್ರಿವಾಲ್ ತಿಳಿಸಿದ್ದಾರೆ.
ಬಿಜೆಪಿ ಅಡ್ಡ ದಾರಿಯಿಂದ ಸರ್ಕಾರ ರಚಿಸುವುದನ್ನು ತಡೆಯಲು ಎ.ಎ.ಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯ ಕೆಲ ಪ್ರಾಮಾಣಿಕ ಶಾಸಕರೊಂದಿಗೆ ಸಂಪರ್ಕದಲ್ಲಿದೆ ಎಂದು ಇದೇ ವೇಳೆ ಹೇಳಿದ್ದಾರೆ.