ಲಖ್ನೌ : 'ಉತ್ತರ ಪ್ರದೇಶ'ದಲ್ಲಿ ಲೋಕಸಭಾ, ವಿಧಾನಸಭಾ ಉಪಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಲವ್ ಜಿಹಾದ್ ವಿಷಯ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಈಗಾಗಲೇ ಕಾಂಗ್ರೆಸ್, ಎಸ್.ಪಿ ಕೆಂಗಣ್ಣಿಗೆ ಗುರಿಯಾಗಿರುವ ಉತ್ತರ ಪ್ರದೇಶ ಶಾಸಕ ಸಂಗೀತ್ ಸೋಮ್ ತಾನು ಪ್ರತಿನಿಧಿಸುತ್ತಿರುವ ಮೀರತ್ ವಿಧಾನಸಭಾ ಕ್ಷೇತ್ರದಲ್ಲಿ ಲವ್ ಜಿಹಾದ್ ನ್ನು ಪ್ರತಿಭಟಿಸಬೇಕು ಎಂದು ಕ್ಷೇತ್ರದ ಮಹಾಪಂಚಾಯತ್ ಗೆ ಆದೇಶ ನೀಡಿದ್ದಾರೆ.
ಪಶ್ಚಿಮ ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ಪ್ರಮುಖ ವಿಷಯವಾಗಿ ಮಾರ್ಪಾಡಾಗಿದ್ದು ಈ ವಿಷಯವನ್ನುಟ್ಟುಕೊಂಡು ಲಕ್ಷಾಂತರ ಜನರನ್ನು ಸೆಳೆಯುವ ಉದ್ದೇಶದಿಂದ ಸಭೆಯೊಂದನ್ನು ಕರೆಯಲಾಗುವುದು ಎಂದು ಸಂಗೀತ್ ಸೋಮ್ ಗೆ ಮಹಾಪಂಚಾಯತ್ ಮುಖ್ಯಸ್ಥರು ತಿಳಿಸಿದ್ದಾರೆ. ಈ ವರೆಗೂ ಸಭೆಯ ದಿನಾಂಕ ನಿಗದಿಯಾಗಿಲ್ಲ.
ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರನ್ನು ಕೋಮು ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಈ ಹಿಂದೆ ಬಂಧಿಸಲಾಗಿತ್ತು. ಅಲ್ಲದೇ ತನಗೆ ಜೀವ ಬೆದರಿಕೆ ಇರುವುದರಿಂದ ಕೇಂದ್ರ ಸರ್ಕಾರ ಹೆಚ್ಚಿನ ಭದ್ರತೆ ಒದಗಿಸಬೇಕೆಂದು ಸಂಗೀತ್ ಸೋಮ್ ಮನವಿ ಮಾಡಿದ್ದು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಒಟ್ಟಾರೆ ಉತ್ತರ ಪ್ರದೇಶ ಉಪಚುನಾವಣೆಯಲ್ಲಿ ಲವ್ ಜಿಹಾದ್ ಪ್ರಮುಖ ವಿಷಯವಾಗಿ ಪರಿಣಮಿಸಿದೆ.