ನವದೆಹಲಿ : ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆ ರದ್ದುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಗೆ ಪಾಕ್ ಪ್ರಧಾನಿ ನವಾಜ್ ಷರೀಫ್ ಸಿಹಿ ಮಾವಿನ ಹಣ್ಣು ನೀಡುವ ಮೂಲಕ ಓಲೈಕೆಗೆ ಮುಂದಾಗಿದ್ದಾರೆ.
ಗಡಿ ನಿಯಂತ್ರಣ ರೇಖೆಯಲ್ಲಿ ಸಂಘರ್ಷ, ಇನ್ನೊಂದೆಡೆ ಕಾಶ್ಮೀರಿ ಪ್ರತ್ಯೇಕವಾದಿಗಳನ್ನು ಭೇಟಿ ಮಾಡಿದ ಪಾಕಿಸ್ತಾನದ ಹೈಕಮಿಷನರ್ ಅಬ್ದುಲ್ ಬಾಸಿತ್ ಭೇಟಿಯಾದ ಕ್ರಮಕ್ಕೆ ಪ್ರತಿರೋಧವಾಗಿ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಸಭೆಯನ್ನು ರದ್ದುಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ ಭಾರತದೊಂದಿಗೆ ಸ್ನೇಹ ಮುಂದುವರೆಸುವ ಭಾಗವಾಗಿ ಪಾಕ್ ಪ್ರಧಾನಿ ಷರೀಫ್ ಇನ್ನೊಂದು ಹೆಜ್ಜೆ ಇಟ್ಟಿದ್ದಾರೆ. ನರೇಂದ್ರ ಮೋದಿಗೆ ಸಿಹಿ ಮಾವಿನ ಹಣ್ಣಿನ ಉಡುಗೊರೆ ಕಳುಹಿಸಿಕೊಡುವ ಮೂಲಕ ಶಾಂತಿ ಸಂದೇಶ ಕಳಿಸಿದ್ದಾರೆ.
ಮಾವಿನ ಹಣ್ಣು ಕಳಿಸಿಕೊಡುವುದರ ಹಿಂದೆ ನ್ಯೂಯಾರ್ಕ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಭೆಗೆ ಮುನ್ನ ನಡೆಯುವ ಶರೀಫ್-ಮೋದಿ ಭೇಟಿಗೆ ಮುನ್ನ ಸೌಹಾರ್ದ ವಾತಾವರಣ ಸೃಷ್ಟಿಸುವ ಇರಾದೆ ಇದ್ದಂತಿದೆ. ಇದರ ಜೊತೆಗೇ ರದ್ದುಗೊಂಡ ಕಾರ್ಯದರ್ಶಿ ಮಟ್ಟದ ಸಭೆಯಿಂದ ಉಂಟಾಗಿರುವ ಹಾನಿ ಸರಿಪಡಿಸುವ ಉದ್ದೇಶವೂ ಅಡಗಿದೆ.
ಪ್ರಧಾನಿ ಮೋದಿ ಅವರಲ್ಲದೆ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೂ ಪಾಕ್ ಪ್ರಧಾನಿ ಷರೀಫ್ ಮಾವಿನ ಹಣ್ಣು ಕಳಿಸಿಕೊಟ್ಟಿದ್ದಾರೆ.