ನವದೆಹಲಿ : ಕಠಿಣ ಪರಿಶ್ರಮ ಪಟ್ಟರೆ ಯಾವುದೇ ಕನಸು ನನಸಾಗದೇ ಇರಲು ಸಾಧ್ಯವಿಲ್ಲ, ಓರ್ವ ವಿದ್ಯಾರ್ಥಿಗೆ ಅಪಾರ ಕನಸಿರಬೇಕು, ಕಠಿಣ ಪರಿಶ್ರಮದಿಂದ ಕನಸುಗಳನ್ನು ನನಸಾಗಿಸಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸೆ.5ರಂದು ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ದೆಹಲಿಯ ಮಾಣಿಕ್ ಶಾ ಆಡಿಟೋರಿಯಂ ನಲ್ಲಿ ದೇಶದ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಭಾರತ ಯುವಜನತೆಯಿಂದ ಕೂಡಿದ ರಾಷ್ಟ್ರವಾಗಿದೆ. ಜಗತ್ತಿನಾದ್ಯಂತ ಒಳ್ಳೆಯ ಶಿಕ್ಷಕರಿಗಾಗಿ ಬೇಡಿಕೆ ಇದೆ. ನಾವು ಭಾರತದಿಂದ ಶಿಕ್ಷಕರನ್ನು ರಫ್ತು ಮಾಡುವ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಕರೇ ಹಿರೋಗಳು, ವಿದ್ಯಾರ್ಥಿಗಳು ಶಿಕ್ಷಕರನ್ನು ಅನುಕರಣೆ ಮಾಡುತ್ತಾರೆ. ಅವರಂತೆಯೇ ಉಡುಪು ಧರಿಸುತ್ತಾರೆ, ವಿದ್ಯಾರ್ಥಿಗಳಲ್ಲಿ ಕಂಡುಬರುವ ಈ ರೀತಿಯ ಉತ್ಸಾವಹವನ್ನು ಬೆಳೆಸಬೇಕಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ವಿದ್ಯಾರ್ಥಿಗಳನ್ನು ತಂತ್ರಜ್ನಾನದೊಂದಿಗೆ ಜೋಡಿಸಬೇಕಿದೆ, ಯುವಪೀಳಿಗೆಯನ್ನು ತಂತ್ರಜ್ನಾನದಿಂದ ದೂರ ಉಳಿಯುವಂತೆ ಮಾಡಬಾರದು ಒಂದು ವೇಳೆ ದೂರ ಮಾಡಿದರೆ ಅದು ಸಾಮಾಜಿಕ ಅಪರಾಧ ಎಂದಿದ್ದಾರೆ.
ಇದೇ ವೇಳೆ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿರುವ ಪ್ರಧಾನಿ ಮೋದಿ, ತಮ್ಮ ಶಿಕ್ಷಕರು, ಶಿಕ್ಷಣ, ಸಂಸ್ಕಾರ, ಮೌಲ್ಯ, ತಮ್ಮ ಜೀವನದಲ್ಲಿ ಅನುಭವಗಳಷ್ಟೇ ಮಹತ್ತರ ಪಾತ್ರ ವಹಿಸಿವೆ ಎಂದು ಜೀವಿತಾವಧಿಯ ಕೆಲವು ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಅರಿವಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾದರೆ ದೇಶದ ಗಣ್ಯರ ಜೀವನ ಚರಿತ್ರೆ ಓದಲು ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಕೌಶಲ್ಯಾಭಿವೃದ್ಧಿ, ಡಿಜಿಟಲ್ ಇಂಡಿಯಾ, ಹೆಣ್ಣು ಮಕ್ಕಳ ಶಿಕ್ಷಣ, ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡುವುದು, ಸೇರಿದಂತೆ ಹಲವು ವಿಷಯಗಳೊಂದಿಗೆ ದೇಶದ ವಿವಿಧ ಭಾಗಗಳಿಂದ ಆಯ್ದ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಹನ ನಡೆಸಿದ್ದಾರೆ.