ನವದೆಹಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಭೇಟಿಯಾಗಿದ್ದು, ಡಿಜಿಟಲ್ ಗವರ್ನೆನ್ಸ್ ಕಾರ್ಯಕ್ರಮಕ್ಕೆ ಆಹ್ವಾನ ನಿಡಿರುವುದಾಗಿ ತಿಳಿಸಿದ್ದಾರೆ.
ರಾಷ್ಟ್ರಪತಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಇ-ಆಡಳಿತ ಜಾರಿಗೆ ತರುವ ಮೂಲಕ ಕಾಗದ ಮುಕ್ತ ಆಡಳಿತಕ್ಕೆ ಸರ್ಕಾರ ಮುಂದಾಗಿದ್ದು ಈ ನಿಟ್ಟಿನಲ್ಲಿ ಡಿಜಿಟಲ್ ಗವರ್ನೆನ್ಸ್ ಯೋಜನೆ ಚಾಲನೆಗೆ ಆಹ್ವಾನ ನೀಡುವ ಸಂಬಂಧ ರಾಷ್ಟ್ರಪತಿ ಭೇಟಿಯಾಗಿರುವುದಾಗಿ ತಿಳಿಸಿದರು.
ಅಕ್ಟೋಬರ್ 3ನೇ ವಾರದಂದು ಡಿಜಿಟಲ್ ಗವರ್ನೆನ್ಸ್ ಕಾರ್ಯಕ್ರಮ ನಿಯೋಜಿಸಲಾಗಿದ್ದು, ರಾಷ್ಟ್ರತಿ ಪ್ರಣಬ್ ಮುಖರ್ಜಿಯವರಿಗೆ ಅನುಕೂಲವಾಗುವ ದಿನದಂದೇ ಕಾರ್ಯಕ್ರಮ ಆಯೋಜನೆಗೆ ನಿರ್ಧರಿಸಿರುವುದಾಗಿ ತಿಳಿಸಿದರು.
ರಾಜ್ಯ ಬಿಜೆಪಿ ನಾಯಕರು ಅರ್ಕಾವತಿ ಡೀನೋಟಿಫಿಕೇಷನ್ ಹಗರಣವನ್ನು ಮುಂದಿಟ್ಟುಕೊಂಡು ರಾಜ್ಯಪಾಲರಿಗೆ ದೂರು ನೀಡಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ಅವಕಾಶ ನೀಡದಂತೆ ಸಂವಿಧಾನಬದ್ಧವಾಗಿ ತಮ್ಮ ನೆರವಿಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ವೇಳೆ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.