ಇಸ್ಲಾಮಾಬಾದ್ : ಕಾಶ್ಮೀರ ಪ್ರತ್ಯೇಕತಾವಾದಿಗಳ ಜತೆ ಮಾತುಕತೆ ನಡೆಸುವುದು ನಮ್ಮ ಹಕ್ಕು. ನಾವು ಅದನ್ನು ಮುಂದುವರೆಸುತ್ತೇವೆ ಎಂದು ಪಾಕಿಸ್ತಾನ ವಿದೇಶಾಂಗ ವಕ್ತಾರೆ ತಸ್ಲೀಂ ಅಸ್ಲಾಂ ತಿಳಿಸಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿರುವ ಅವರು ಕಾಶ್ಮೀರಿ ಪ್ರತ್ಯೇಕತಾವಾದಿಗಳೊಂದಿಗಿನ ಚರ್ಚೆ ಇದೇ ಮೊದಲಲ್ಲ, ಹಿಂದಿನಿಂದಲೂ ನಡೆದುಕೊಂಡುಬಂದಿದೆ. ಅವರೊಂದಿಗೆ ಚರ್ಚೆ ನಡೆಸುವುದು ನಮ್ಮ ಹಕ್ಕು. ಅದನ್ನು ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.
ಭಾರತದ ನಿಲುವನ್ನು ಯಾರೂ ಸ್ವಾಗಿತ ಮಾಡಲು ಸಾಧ್ಯವಿಲ್ಲ, ಅದನ್ನು ಯಾರೂ ಕೂಡ ಒಪ್ಪುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರ ಪ್ರಸ್ತಾಪಕ್ಕೆ ತಿರುಗೇಟು ನೀಡಿದ್ದಾರೆ. ಇದರಿಂದಾಗಿ ಉಭಯ ದೇಶಗಳ ನಡುವುನ ದ್ವಿಪಕ್ಷೀಯ ಮಾತುಕತೆಗೆ ತೀವ್ರ ಹಿನ್ನಡೆಯುಂಟಾಗಿದೆ.
ಕಾಶ್ಮೀರ ಪ್ರತ್ಯೇಕತಾವಾದಿಗಳ ಜತೆ ಪಾಕಿಸ್ತಾನ ಮಾತುಕತೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ಮೋದಿ, ಶಾಂತಿಯುತ ಮತ್ತು ಸ್ನೇಹಪರ ದ್ವಿಪಕ್ಷೀಯ ಮಾತುಕತೆಗೆ ಭಾರತ ಸದಾ ಸಿದ್ಧ, ಈ ಬಗ್ಗೆ ನಮ್ಮ ಪ್ರಯತ್ನ ಮುಂದುವರೆಯಲಿದೆ. ಆದರೆ ಪ್ರತ್ಯೇಕತಾವಾದಿಗಳೊಂದಿಗಿನ ಮಾತುಕತೆ ಭಾರತಕ್ಕೆ ನಿರಾಸೆ ಮೂಡಿಸಿದೆ. ಅರ್ಥಪೂರ್ಣ ದ್ವಿಪಕ್ಷೀಯ ಮಾತುಕತೆಗೆ ಭಯೋತ್ಪಾದನಾ ರಹಿತ ಮತ್ತು ಅಹಿಂಸಾ ವಾತಾವರಣ ಅಗತ್ಯವಿದೆ ಎಂದು ಮೋದಿ ಹೇಳಿದ್ದರು.