ಲಖ್ನೌ : 'ಉತ್ತರ ಪ್ರದೇಶ'ದಲ್ಲಿ ಕಳೆದ ವಾರ ನಡೆದ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ 'ಲವ್ ಜಿಹಾದ್' ವಿಷಯದ ಬಗ್ಗೆ ಅಧಿಕೃತ ನಿರ್ಣಯ ಕೈಗೊಳ್ಳದೇ ಇದ್ದರೂ ಸಹ, ವಿಧಾನಸಭಾ, ಲೋಕಸಭಾ ಉಪಚುನಾವಣೆಯಲ್ಲಿ ಲವ್ ಜಿಹಾದ್ ಪ್ರಮುಖ ವಿಷಯವಾಗಲಿದೆ ಎಂದು ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಲವ್ ಜಿಹಾದ್, ಖಂಡಿತವಾಗಿಯೂ ಚುನಾವಣಾ ವಿಷಯವಾಗಲಿದೆ. ಈ ಬಗ್ಗೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಆದಿತ್ಯನಾಥ್ ಹೇಳಿದ್ದಾರೆ.
ಕೇರಳದಿಂದ ಆರಂಭವಾದ ಲವ್ ಜಿಹಾದ್ ಎಂಬ ವಿಪತ್ತು ಈಗ ಉತ್ತರ ಪ್ರದೇಶದ ಪಶ್ಚಿಮದ ವರೆಗೂ ಹರಡಿದೆ. ಕಳೆದ 4-5 ವರ್ಷಗಳಿಂದ ಈ ವಿಷಯವನ್ನು ರಾಜ್ಯದಲ್ಲಿ ಪ್ರಸ್ತಾಪಿಸುತ್ತಿರುವುದಾಗಿ ಸಂಸದ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಅಖಿಲೇಶ್ ಯಾದವ್ ನೇತೃತ್ವದ ಎಸ್.ಪಿ ಸರ್ಕಾರ ಅಸ್ಥಿತ್ವಕ್ಕೆ ಬಂದಾಗಿನಿಂದಲೂ ರಾಜ್ಯದಲ್ಲಿ ಕೋಮುಗಲಭೆ ಹೆಚ್ಚುತ್ತಿದ್ದು, ಸಮಾಜವಾದಿ ಪಕ್ಷ ಮುಸ್ಲಿಂ ಓಲೈಕೆಯಲ್ಲಿ ತೊಡಗಿದೆ. ಪರಿಣಾಮ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿವೆ ಎಂದು ಸಂಸದರು ಆರೋಪಿಸಿದ್ದಾರೆ.
ಕಾರ್ಯಕಾರಿ ಸಮಿತಿ ಸಭೆಯಲ್ಲಿ ಲವ್ ಜಿಹಾದ್ ವಿಷಯದ ಬಗ್ಗೆ ಅಧಿಕೃತ ನಿರ್ಣಯ ಕೈಗೊಳ್ಳದೇ ಇರುವುದಕ್ಕೆ ಕಾರಣ ನೀಡಿರುವ ಆದಿತ್ಯನಾಥ್, ಕಾನೂನು ಸುವ್ಯವಸ್ಥೆ ದೃಷ್ಠಿಯಿಂದ ಅಧಿಕೃತ ನಿರ್ಣಯ ಕೈಗೊಂಡಿಲ್ಲ. ಆದರೆ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು ಚುನಾವಣಾ ವಿಷಯವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.