ಬೆಂಗಳೂರು : ಆಶ್ರಯ ಮನೆ ವಸತಿ ಯೋಜನೆಯ ಸಾಲ ಮನ್ನಾ ಮಾಡಿ ರಾಜ್ಯ ಸಚಿವ ಸಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳ ಬಾಕಿಯಿರುವ ಸಾಲ ಮನ್ನಾ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಆಶ್ರಯ ಮನೆ ಯೋಜನೆಯ ನನ್ನ ಮನೆ, ನನ್ನ ಸ್ವಂತ ಯೋಜನೆಯ 11 ಲಕ್ಷ ಫಲಾನುಭವಿಗಳ 2,480ಕೋಟಿ ರೂ ಅಸಲು ಮತ್ತು ಬಡ್ದಿ ಹಾಗೂ ಹುಡ್ಕೋ ಯೋಜನೆಯ 57,101 ಫಲಾನುಭವಿಗಳ ಅಸಲು ಹಾಗೂ ಬಡ್ದಿಯನ್ನು ಸಂಪೂರ್ಣ ಮನ್ನಾ ಮಾಡಲಾಗುವುದು ಎಂದು ತಿಳಿಸಿದರು.
2010ರ ಕೆಪಿಎಸ್ ಸಿ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕ ವಿವಾದಕ್ಕೆ ಸಂಬಂಧಿಸಿದಂತೆ ಸಿದ್ದೇಶ್ವರ್ ಅವರ ಅಂಕ ರೀಟೋಟಲಿಂಗ್ ಮಾಡಲು ನಿರ್ಧರಿಸಲಾಗಿದೆ. ಉಳಿದ ಅಭ್ಯರ್ಥಿಗಳ ವಿಚಾರದಲ್ಲಿ ನ್ಯಾಯಾಲಯದ ಆದೇಶದಂತೆ ಯಥಾಸ್ಥಿತಿ ಮುಂದುವರೆಯಲಿದೆ ಎಂದರು.
ಹುಣಸೂರು ಪುರಸಭೆಯನ್ನು ನಗರಸಭೆಯನ್ನಾಗಿ ಹಾಗೂ ಗುರುಮಿಠಕಲ್ ಪಟ್ಟಣ ಪಂಚಾಯತ್ ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಸಮ್ಮತಿ ನೀಡಿದೆ ಎಂದು ತಿಳಿಸಿದರು.