ನವದೆಹಲಿ : ಸೆ.3ಕ್ಕೆ ನೂರು ದಿನಗಳು ತುಂಬಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ, ಈ ಸಂಭ್ರಮವನ್ನು ಸಾಮಾಜಿಕ ಬದಲಾವಣೆಯೊಂದಿಗೆ ಆರ್ಥಿಕ ಪ್ರಗತಿ ಎಂಬ ವಿಷಯದೊಂದಿಗೆ ಮಾಧ್ಯಮದ ಮೂಲಕ ಅನಾವರಣಗೊಳಿಸಲು ಸಿದ್ಧತೆ ನಡೆಸಿದೆ.
ನೂರು ದಿನಗಳ ಅವಧಿಯಲ್ಲಿ ತಾನು ಮಾಡಿದ್ದೇನು ಎಂಬುದನ್ನು ಸರಣಿ ಸುದ್ದಿಗೋಷ್ಠಿಗಳ ಮೂಲಕ ದೇಶದ ಜನರ ಮುಂದಿಡಲು ನಿರ್ಧರಿಸಿದೆ. ಇದರ ಮೊದಲ ಹಂತವಾಗಿ ಹಣಕಾಸು ಸಚಿವಾಲಯ ಈಗಾಗಲೇ ಸುದ್ದಿಗೋಷ್ಠಿ ನಡೆಸಿದ್ದು, ಮುಂದಿನ ಸರದಿ ಮೂಲ ಸೌಕರ್ಯ ಹಾಗೂ ಸಮಾಜಕಲ್ಯಾಣ ಇಲಾಖೆಯದ್ದಾದಾಗಿರಲಿದೆ.
ಸರ್ವರಿಗೂ ವಸತಿ, ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಡಿ ರೈಲ್ವೆ, ಬಂದರು, ರಸ್ತೆ ಪ್ರವಾಸೋದ್ಯಮ, ಸ್ಮಾರ್ಟ್ ಸಿಟಿಯಂತಹ ಮೂಲಸೌಕರ್ಯ ಅಭಿವೃದ್ಧಿ, ಹಣದುಬ್ಬರ ನಿಯಂತ್ರಣ, ಆರ್ಥಿಕ ಅಭಿವೃದ್ಧಿಗೆ ಯೋಜನೆ ಮುಂತಾದ ವಿಚಾರಗಳನ್ನು ಸರ್ಕಾರ ಬಿಂಬಿಸಿಕೊಳ್ಳುವ ನಿರೀಕ್ಷೆಯಿದೆ.
ಆಹಾರಧಾನ್ಯಗಳು, ಪೆಟ್ರೋಲ್ ಬೆಲೆ ಇಳಿಕೆ, ಮಾಲಿನ್ಯಕಾರಕ 46 ಕಾರ್ಖಾನೆಗಳನ್ನು ಮುಚ್ಚಿಸುವ ಮೂಲಕ ಗಂಗಾ ಶುದ್ಧೀಕರಣಕ್ಕೆ ಮುನ್ನುಡಿ ಮುಂತಾದ ಯೋಜನೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಸಾಧ್ಯತೆಗಳಿವೆ.