ನವದೆಹಲಿ : 'ಯೋಜನಾ ಆಯೋಗ'ಕ್ಕೆ ಬದಲಾಗಿ ಜಾರಿಯಾಗಲಿರುವ ಹೊಸ ಸಂಸ್ಥೆಯಲ್ಲಿ 8 ಜನರನ್ನೊಳಗೊಂಡ ಥಿಂಕ್ ಟ್ಯಾಂಕ್ ಕಾರ್ಯನಿರ್ವಹಿಸಲಿದೆ. ಆರ್ಥ ಶಾಸ್ತ್ರಜ್ನರು, ಸಾಮಾಜಿಕ ವಲಯದ ಪ್ರತಿನಿಧಿಗಳು, ಸರ್ಕಾರದ ಪ್ರತಿನಿಧಿಗಳು, ಕೈಗಾರಿಕೆ, ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು ನೂತನ ಸಂಸ್ಥೆಯ ಭಾಗವಾಗಿರಲಿದ್ದಾರೆ.
ರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ, 8 ಜನರ ಪೈಕಿ, 4 ಜನರು ಸರ್ಕಾರದವರೇ ಆಗಿದ್ದರೆ ಉಳಿದ 4 ಜನರು ಹೊರಗಿನವರಾಗಿರುತ್ತಾರೆ ಎಂದು ತಿಳಿದುಬಂದಿದೆ. ನೂತನ ಆಯೋಗಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ಸಾರಥ್ಯ ವಹಿಸಿಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಹೊಸ ಸಂಸ್ಥೆಯಲ್ಲಿ ಪ್ರಧಾನಿ ನೇರವಾಗಿ ತೊಡಗಿಸಿಕೊಳ್ಳುವ ಇರಾದೆ ವ್ಯಕ್ತಪಡಿಸದೇ ಇದ್ದರೆ ಅಧ್ಯಕ್ಷರನ್ನು ನೇಮಕ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ನರೇಂದ್ರ ಮೋದಿ ಚುನಾವಣಾ ಪ್ರಚಾರದ ವೇಳೆ ಅವರ ಥಿಂಕ್ ಟ್ಯಾಂಕ್'ನಲ್ಲಿದ್ದ ಮುಕ್ತ ಮಾರುಕಟ್ಟೆ ಸಮರ್ಥಕ ಅರ್ಥಶಾಸ್ತ್ರಜ್ಞರಾದ ಅರವಿಂದ್ ಪನಗರಿಯಾ ಮತ್ತು ವಿವೇಕ್ ದೇಬರಾಯ್ ಕೂಡ ಈ ತಂಡದಲ್ಲಿರುತ್ತಾರೆ ಎಂದು ಹೇಳಲಾಗಿದೆ.
ಯೋಜನಾ ಆಯೋಗದ ಬದಲಿಗೆ ಅಸ್ಥಿತ್ವಕ್ಕೆ ಬರಲಿರುವ ಹೊಸ ಆಯೋಗ ಅಸ್ಥಿತ್ವಕ್ಕೆ ಬರುವುದಕ್ಕೂ ಮುನ್ನ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ. ಇದೇ ವೇಳೆ ಯೋಜನಾ ಆಯೋಗದ ಎಲ್ಲಾ ಮಾಜಿ ಅಧ್ಯಕ್ಷರುಗಳೊಂದಿಗೆ ಚರ್ಚೆ ನಡೆಸಲು ಮೋದಿ ಸಭೆಯನ್ನು ಆಯೋಜಿಸಿದ್ದಾರೆ. ಈ ಸಭೆಯಲ್ಲಿ ಪಾಲ್ಗೊಳಲ್ಲು ಯೋಜನಾ ಆಯೋಗದಲ್ಲಿ ಸೇವೆ ಸಲ್ಲಿಸಿದ್ದ ಎಲ್ಲಾ ಅಧ್ಯಕ್ಷ, ಉಪಾಧ್ಯಕ್ಷರಿಗೆ ಮೋದಿ ಆಮಂತ್ರಣ ನೀಡಿದ್ದಾರೆ.
ನನಗೂ ಪ್ರಧಾನಿ ಮೋದಿ ಅವರಿಂದ ಆಮಂತ್ರಣ ಬಂದಿದೆ. ಆದರೆ ವಿದೇಶಕ್ಕೆ ತೆರಳುತ್ತಿರುವುದರಿಂದ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ತಿಳಿಸಿದ್ದಾರೆ.