ನವದೆಹಲಿ : 'ರಂಜಾನ್' ಉಪವಾಸದಲ್ಲಿದ್ದ ಕ್ಯಾಟರಿಂಗ್ ಮೇಲ್ವಿಚಾರಕನಿಗೆ ಚಪಾತಿ ತಿನ್ನಿಸಲೆತ್ನಿಸಿದ ಪ್ರಕರಣವನ್ನು ದೆಹಲಿ ಹೈಕೋರ್ಟ್ ಆ.22ರಂದು ವಜಾಗೊಳಿಸಿದೆ.
ಬಲವಂತವಾಗಿ ಚಪಾತಿ ತಿನ್ನಿಸಲೆತ್ನಿಸುವ ಮೂಲಕ ಮಹಾರಾಷ್ಟ್ರ ಸದನದ ಮುಸ್ಲಿಂ ಸಿಬ್ಬಂದಿ ಉಪವಾಸಕ್ಕೆ ಅಡ್ಡಿಪಡಿಸಿದ್ದ 11 ಶಿವಸೇನೆ ಸಂಸದರನ್ನು ಅನರ್ಹಗೊಳಿಸಲು ಲೋಕಸಭೆ ಹಾಗೂ ರಾಜ್ಯಸಭಾಧ್ಯಕ್ಷರಿಗೆ ನಿರ್ದೇಶಿಸಬೇಕೆಂದು ಕೋರಿ ದೆಹಲಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಸಲ್ಲಿಸಲಾಗಿತ್ತು.
ಈ ಸಂಬಂಧ ವಿಚಾರಣೆ ನಡೆಸಿದ ಮುಖ್ಯನ್ಯಾಯ ಮೂರ್ತಿ ಜಿ.ರೋಹಿಣಿ ಹಾಗೂ ನ್ಯಾ.ಜಯಂತ್ ನಾಥ್ ಅವರಿದ್ದ ಪೀಠ, ಅರ್ಜಿದಾರ ಮೌಲಾನ್ ಅನ್ಸರ್ ರಜಾ ತಮ್ಮ ಪಿಐಎಲ್ಗೆ ಸಾಕಷ್ಟು ಸಾಕ್ಷ್ಯಾಧಾರ ಒದಗಿಸದ ಕಾರಣ ಅರ್ಜಿಯನ್ನು ವಜಾ ಮಾಡುವುದಾಗಿ ಹೇಳಿದೆ.
ಜುಲೈ 17 ರಂದು ಮಹಾರಾಷ್ಟ್ರ ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿ ಕಳಪೆ ಆಹಾರ ತಯಾರಿಸಿದ್ದರ ಹಿನ್ನೆಲೆಯಲ್ಲಿ ಕ್ಯಾಟರಿಂಗ್ ಮೇಲ್ವಿಚಾರಕನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಶಿವಸೇನೆ ಮುಖಂಡರು, ಅರ್ಷದ್ ಝುಬೇರ್ ಗೆ ಬಲವಂತದಿಂದ ಆಹಾರ ತಿನ್ನಿಸಲೆತ್ನಿಸಿದ್ದರು.
ಶಿವಸೇನೆ ಸಂಸದರ ಈ ನಡೆ ಅಪರಾಧವಾಗಿದ್ದು, ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಆತನಿಗೆ ಕಠಿಣ ಶಿಕ್ಷೆ ನೀಡಬೇಕು, ಘಟನೆಗೆ ಸಂಬಂಧಿಸಿದಂತೆ ಉಪಸ್ಥಿತರಿದ್ದ ಶಿವಸೇನೆಯ 11 ಸಂಸದರನ್ನೂ ಅನರ್ಹಗೊಳಿಸಲು ನಿರ್ದೇಶನ ನೀಡಬೇಕೆಂದು ದೆಹಲಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.