ನವದೆಹಲಿ : 'ಆಮ್ ಆದ್ಮಿ ಪಕ್ಷ'ದ ರ್ಯಾಲಿಯಲ್ಲಿ ನೇಣುಬಿಗಿದುಕೊಂಡು ಮೃತಪಟ್ಟ ರೈತ ಗಜೇಂದ್ರ ಸಿಂಗ್ ನನ್ನು ಹುತಾತ್ಮನನ್ನಾಗಿ ಘೋಷಿಸುವ ದೆಹಲಿ ಸರ್ಕಾರದ ನಿರ್ಧಾರವನ್ನು ವಕೀಲರೊಬ್ಬರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಆಪ್ ನೇತೃತ್ವದ ದೆಹಲಿ ಸರ್ಕಾರ ಮೃತ ರೈತನನ್ನು ಹುತಾತ್ಮನನ್ನಾಗಿ ಘೋಷಿಸುವುದಕ್ಕೆ ತಡೆ ನೀಡಬೇಕೆಂದು ಅಡ್ವೊಕೇಟ್ ಅವಧ್ ಕೌಶಿಕ್ ದೆಹಲಿ ಹೈಕೋರ್ಟ್ ಗೆ ಪಿ.ಐ.ಎಲ್ ಸಲ್ಲಿಸಿದ್ದಾರೆ. ಮೃತ ರೈತನನ್ನು ಹುತಾತ್ಮನೆಂದು ಘೋಷಿಸುವ ಮೂಲಕ ಆಮ್ ಆದ್ಮಿ ಸರ್ಕಾರ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಕಥೆಯನ್ನು ನಿಜ ಮಾಡಲು ಹೊರಟಿದೆ. ಆದ್ದರಿಂದ ಆತನನ್ನು ಹುತಾತ್ಮನೆಂದು ಘೋಷಿಸುವುದಕ್ಕೆ ಅವಕಾಶ ನೀಡಬಾರದು ಎಂದು ಪಿ.ಐ.ಎಲ್ ನಲ್ಲಿ ಮನವಿ ಮಾಡಲಾಗಿದೆ.
ಆತ್ಮಹತ್ಯೆಯನ್ನು ವೈಭವೀಕರಿಸುತ್ತಿರುವ ಆಪ್ ಸರ್ಕಾರ ಅದನ್ನು ಮತ್ತಷ್ಟು ಜನರಿಗೆ ಪ್ರೇರಕವಾಗುವಂತೆ ಮಾಡಲು ಹೂರಟಿದೆ. ಐಪಿಸಿ ಸೆಕ್ಷನ್ 309ರ ಪ್ರಕಾರ ಇದು ಅಪರಾಧ ಎಂದು ಪಿ.ಐ.ಎಲ್ ನಲ್ಲಿ ಆರೋಪಿಸಲಾಗಿದೆ. ಇದೇ ವೇಳೆ ಜಂತರ್ ಮಂತರ್ ನಲ್ಲಿ ಆಪ್ ಹಮ್ಮಿಕೊಂಡಿದ್ದಂತಹ ಬೃಹತ್ ರ್ಯಾಲಿಗಳಿಗೆ ಇನ್ನು ಮುಂದೆ ಅನುಮತಿ ನೀಡಬಾರದು ಎಂದು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಅವಧ್ ಕೌಶಿಕ್ ಕೋರಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂಸ್ವಾಧೀನ ಮಸೂದೆಯನ್ನು ವಿರೋಧಿಸಿ ಏ.22ರಂದು ಆಪ್ ಆದ್ಮಿ ಪಕ್ಷ ನಡೆಸಿದ್ದ ರ್ಯಾಲಿಯಲ್ಲಿ ರಾಜಸ್ಥಾನದ ಮೂಲದ ರೈತ ಗಜೇಂದ್ರ ಸಿಂಗ್ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ. ಗಜೇಂದ್ರ ಸಿಂಗ್ ಗೆ ಮರ ಹತ್ತಿ ನೇಣು ಬಿಗಿದುಕೊಳ್ಳುವಂತೆ ಆಪ್ ಕಾರ್ಯಕರ್ತರೇ ಪ್ರಚೋದನೆ ನೀಡಿದ್ದರು ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ಮಧ್ಯಂತರ ವರದಿ ನೀಡಿದ್ದಾರೆ.