ನವದೆಹಲಿ : ಗೃಹ ಸಚಿವ ರಾಜನಾಥ್ ಸಿಂಗ್ ವಾಸಿಸುತ್ತಿರುವ ನಿವಾಸ ಭದ್ರತಾ ಗುಣಮಟ್ಟಕ್ಕೆ ಅನುಗುಣವಾಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ದೆಹಲಿಯಲ್ಲಿ ನಡೆದ ಭದ್ರತಾ ಪರಿಶೀಲನಾ ಸಭೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.
ದೆಹಲಿ ಪೊಲೀಸ್ ಅಧಿಕಾರಿಗಳು, ಗುಪ್ತಚರ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದ ಭದ್ರತಾ ಪರಿಶೀಲನೆ ಸಭೆಯಲ್ಲಿ, ಮೋದಿ ಸರ್ಕಾರದಲ್ಲಿ ಮಹತ್ವದ ಖಾತೆ ನಿರ್ವಹಿಸುತ್ತಿರುವ ಗೃಹ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಚಿವ ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು, ನಿತಿನ್ ಗಡ್ಕರಿ, ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಜೀವಕ್ಕೆ ಅಪಾಯವಿದೆ ಎಂಬ ಅಂಶವೂ ಬಯಲಾಗಿದೆ.
ಗುಪ್ತಚರ ಇಲಾಖೆ ಪ್ರಕಾರ ಗೃಹ ಸಚಿವ ರಾಜನಾಥ್ ಸಿಂಗ್ ವಾಸಿಸುತ್ತಿರುವ ನಿವಾಸದಲ್ಲಿ ಭದ್ರತೆಗೆ ಸಂಬಂಧಿಸಿದಂತೆ ಕನಿಷ್ಠ 20 ನ್ಯೂನತೆಗಳಿದ್ದು ಶೀಘ್ರವೇ ಅದನ್ನು ಬಗೆಹರಿಸಲು ತೀರ್ಮಾನಿಸಲಾಗಿದೆ. ರಾಜನಾಥ್ ಸಿಂಗ್ ಅವರ ನಿವಾಸ ಪ್ರತಿಭಟನೆಗೆ ಖ್ಯಾತಿ ಪಡೆದಿರುವ ಜಂತರ್ ಮಂತರ್ ಗೆ ಸಮೀಪದಲ್ಲಿದ್ದು ಗೃಹ ಸಚಿವರಿಗೆ ಭದ್ರತಾ ಸವಾಲು ಎದುರಾಗಿದೆ ಎಂದು ಹೇಳಲಾಗಿದೆ.
ದೆಹಲಿ ಪೊಲೀಸರು,ರಾಷ್ಟ್ರೀಯ ಭದ್ರತಾ ಗಾರ್ಡ್(ಎನ್.ಎಸ್.ಜಿ) ಪಡೆ, ಉತ್ತರ ಪ್ರದೇಶ ಪೊಲೀಸರು ಗೃಹ ಸಚಿವರಿಗೆ ಸಂಪೂರ್ಣ ಭದ್ರತೆ ಒದಗಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಗೃಹ ಸಚಿವ ರಾಜನಾಥ್ ಸಿಂಗ್ ಗೆ Z+ ಶ್ರೇಣಿಯ ಭದ್ರತೆ ಒದಗಿಸಲಾಗಿದೆ. ಆದಾಗ್ಯೂ ದೇಶದ ಗೃಹ ಸಚಿವರಿಗೆ ಅಪಾಯ ಎದುರಿಸುತ್ತಿದ್ದಾರೆ. ಭದ್ರತಾ ದೃಷ್ಠಿಯಿಂದ ರಾಜನಾಥ್ ಸಿಂಗ್ ಗೆ ಅಕ್ಬರ್ ರೋಡ್ ನಲ್ಲಿ ಮತ್ತೊಂದು ಬಂಗಲೆ ನೀಡಲಾಗಿದ್ದು ಶೀಘ್ರವೇ ರಾಜನಾಥ್ ಸಿಂಗ್ ವಾಸ್ತವ್ಯ ಹೂಡಲಿದ್ದಾರೆ ಎಂದು ಹೇಳಾಗಿದೆ.