ನವದೆಹಲಿ : '2 ಜಿ ಹಗರಣ'ದಲ್ಲಿ ಹಣ ದುರುಪಯೋಗ ಮಾಡಿಕೊಂಡಿರುವ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಎ.ರಾಜಾ, ಕನಿಮೋಳಿಗೆ ಆ.20ರಂದು ಸಿ.ಬಿ.ಐ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಸ್ವಾನ್ ಟೆಲಿಕಾಂ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಶಾಹಿದ್ ಉಸ್ಮಾನ್ ಬಲ್ವಾ ಸೇರಿದಂತೆ ಪ್ರಕರಣದ ಎಲ್ಲಾ ಆರೋಪಿಗಳಿಗೂ ಇದೇ ವೇಳೆ ಜಾಮೀನು ಮಂಜೂರು ಮಾಡಲಾಗಿದೆ.
ಜಾರಿ ನಿರ್ದೇಶನಾಲಯ ಸಲ್ಲಿಸಿದ 2ಜಿ ಹಗರಣದ ಆರೋಪ ಪಟ್ಟಿಯ ಬಗ್ಗೆ ಆಗಸ್ಟ್ 6 ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ, ಆರೋಪಿಗಳಾದ ರಾಜಾ ಮತ್ತು ಕನಿಮೋಳಿ ಜಾಮೀನು ಅರ್ಜಿ ವಿಚಾರಣೆಯನ್ನು ಇವತ್ತಿಗೆ ಮುಂದೂಡಿತ್ತು.
2ಜಿ ಹಗರಣ ಕುರಿತಂತೆ ಜಾರಿ ನಿರ್ದೇಶನಾಲಯ 10 ಮಂದಿ ಆರೋಪಿಗಳು ಮತ್ತು 9 ಸಂಸ್ಥೆಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದು, ಒಟ್ಟು 200 ಕೋಟಿ ರೂ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿದೆ.
ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರ ಪತ್ನಿ ದಯಾಳು ಅಮ್ಮಾಳ್, ಸ್ವಾನ್ ಟೆಲಿಕಾಮ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ (ಎಸ್.ಟಿ.ಪಿ.ಎಲ್) ಪ್ರೊಮೊಟರ್ ಗಳಾದ ಶಾಹೀದ್ ಉಸ್ಮಾನ್ ಬಲ್ವಾ, ವಿನೋದ್ ಗೋಯಂಕಾ, ಕುಸೇಗಾಂವ್ ಫ್ರೂಟ್ಸ್ ಅಂಡ್ ವೆಜಿಟೆಬಲ್ಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರುಗಳಾದ ಅಸಿಫ್ ಬಲ್ವಾ, ರಾಜೀವ್ ಅಗರ್ ವಾಲ್, ಬಾಲಿವುಡ್ ನಿರ್ಮಾಪಕ ಕರೀಮ್ ಮೊರಾನಿ, ಕಲೈಜ್ಞರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ಶರದ್ ಕುಮಾರ್ ಅವರ ಹೆಸರೂ ಆರೋಪಪಟ್ಟಿಯಲ್ಲಿವೆ. ಒಟ್ಟು 10 ಜನರು ಹಾಗೂ 9 ಕಂಪನಿಗಳ ವಿರುದ್ಧ ದೋಷಾರೋಪ ಹೊರಿಸಲಾಗಿದೆ. ಇದೇ ಪ್ರಕರಣದಲ್ಲಿ ಎಂ.ಕರುಣಾನಿಧಿ ಅವರ ಪತ್ನಿ ದಯಾಳು ಅಮ್ಮಾಳ್ ಅವರಿಗೂ ಜಾಮೀನು ದೊರೆತಿದೆ.