ನವದೆಹಲಿ : 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಹಗರಣದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪಾತ್ರ ಏನು ಇಲ್ಲ ಎಂದು ವಿಶೇಷ ಕೋರ್ಟ್ ಗೆ ಸಿಬಿಐ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.
ಹಗರಣಕ್ಕೆ ಸಂಬಂಧಿಸಿದಂತೆ ಅಂತಿಮ ವಿಚಾರಣೆ ನಡೆಯುತ್ತಿದ್ದು, 2ಜಿ ತರಂಗಾಂತರ ಹಂಚಿಕೆಯ ನೀತಿ, ನಿಯಮಗಳ ಕುರಿತಂತೆ ಟೆಲಿಕಾಂ ಖಾತೆಯ ಮಾಜಿ ಸಚಿವ ಎ.ರಾಜಾ ಅಂದು ಪ್ರಧಾನಿ ಮನಮೋಹನ್ ಸಿಂಗ್ ಅವರ ದಿಕ್ಕು ತಪ್ಪಿಸಿದ್ದರು ಎಂದು ಸಿಬಿಐ ವಿಶೇಷ ಕೋರ್ಟ್ ಗೆ ಮಾಹಿತಿ ನೀಡಿದೆ.
2ಜಿ ತರಂಗಾಂತರವನ್ನು ಅರ್ಹತೆ ಹೊಂದಿರದ ಸ್ವಾನ್ ಟೆಲಿಕಾಂ ಪ್ರೈ.ಲಿ ಹಾಗೂ ಯುನಿಟೆಕ್ ವೈಯರಲೆಸ್ ಕಂಪನಿಗೆ ನೀಡಲಾಗಿತ್ತು ಎಂದು ತಿಳಿಸಿದೆ.
ಅಷ್ಟೇ ಅಲ್ಲ 2ಜಿ ಹಂಚಿಕೆಗಾಗಿ ಆರೋಪಿತ ಕಂಪನಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎ.ರಾಜಾ ಉದ್ದೇಶಪೂರ್ವಕವಾಗಿಯೇ ದಿನಾಂಕದ ಬದಲಾವಣೆ ಮಾಡಿದ್ದರು ಎಂದು ತನಿಖಾ ಸಂಸ್ಥೆ ಸಿಬಿಐ ಗಂಭೀರವಾಗಿ ಆರೋಪಿಸಿದೆ.
ರಾಜಕೀಯ ವಲಯ ಹಾಗೂ ದೇಶಾದ್ಯಂತ ವಿವಾದ ಎಬ್ಬಿಸಿದ್ದ 2ಜಿ ಹಗರಣದಲ್ಲಿ ಟೆಲಿಕಾಂ ಮಾಜಿ ಸಚಿವ ಎ.ರಾಜಾ, ಡಿಎಂಕೆ ಸಂಸದೆ ಕನಿಮೋಳಿ ಹಾಗೂ ಪ್ರತಿಷ್ಠಿತ ಕಾರ್ಪೋರೇಟ್ ಎಕ್ಸಿಕ್ಯೂಟಿವ್ ಗಳು ವಿಚಾರಣೆ ಎದುರಿಸುತ್ತಿದ್ದಾರೆ. ಸಿಬಿಐ ಆರೋಪ ಪಟ್ಟಿಯಂತೆ, 2ಜಿ ತರಂಗಾಂತರ ಹಂಚಿಕೆಯ 122 ಲೈಸೆನ್ಸ್ ನಿಂದಾಗಿ ಸುಮಾರು 31 ಸಾವಿರ ಕೋಟಿ ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ಆರೋಪಿಸಿದೆ.2012ರ ಫೆಬ್ರುವರಿ 2ರಂದು 122 ಲೈಸೆನ್ಸ್ ಅನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದ್ದರಿಂದ ಸರ್ಕಾರಕ್ಕೆ 30,984 ಕೋಟಿ ನಷ್ಟವಾಗಿದೆ ಎಂದು ಸಿಬಿಐ ವಿವರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಎಡಿಎಜಿ ಅಧ್ಯಕ್ಷ ಅನಿಲ್ ಅಂಬಾನಿ, ಪತ್ನಿ ಟೀನಾ ಅಂಬಾನಿ, ಕಾರ್ಪೋರೇಟ್ ಮಾಜಿ ಲಾಬಿಗಾರ್ತಿ ನೀರಾ ರಾಡಿಯಾ ಸೇರಿದಂತೆ ಸಿಬಿಐಯ 154 ಸಾಕ್ಷಿಗಳ ಹೇಳಿಕೆಯನ್ನು ಕೋರ್ಟ್ ದಾಖಲಿಸಿಕೊಂಡಿದೆ.