ನವದೆಹಲಿ : ಪ್ರಪಂಚದಲ್ಲಿ ಬೇರೆ ವಿಜ್ನಾನಿಗಳಿಗಿಂತಲೂ ಭಾರತದ ವಿಜ್ನಾನಿಗಳು ಮುಂದಿರಬೇಕು. ಕಾಲಮಿತಿಗಿಂತಲೂ ಮುನ್ನವೇ ಯೋಜನೆಗಳನ್ನು ಪೂರ್ಣಗೊಳಿಸುವಂತಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ಸಂಶೋಧಕರಿಗೆ ಕರೆ ನೀಡಿದ್ದಾರೆ.
ಪ್ರಪಂಚದ ಬೇರೆ ವಿಜ್ನಾನಿಗಳು ಅವರ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೂ ಮುನ್ನ ಭಾರತದ ಸಂಶೋಧಕರು ತಮ್ಮ ಕೆಲಸ ಮುಗಿಸಿರಬೇಕು, ಈ ಮೂಲಕ ಜಗತ್ತಿಗೆ ಭಾರತ ಮಾದರಿ ರಾಷ್ಟ್ರವಾಗಲು ಸಾಧ್ಯ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಆ.20ರಂದು ನವದೆಹಲಿಯಲ್ಲಿ ನಡೆದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿ.ಆರ್.ಡಿ.ಒ)ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಡಿ.ಆರ್.ಡಿ.ಒ ವಿಜ್ನಾನಿಗಳಿಗೆ ನಿಗದಿಪಡಿಸಿರುವ ಕಾಲಮಿತಿಗೂ ಮುನ್ನ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗಳಿಸಬೇಕೆಂದು ತಾಕೀತು ಮಾಡಿದ್ದಾರೆ.
ಮನುಕುಲದ ಅಭಿವೃದ್ಧಿಗಾಗಿ ನಮ್ಮ ವಿಜ್ನಾನಿಗಳು ಲ್ಯಾಬ್ ಗಳಲ್ಲಿ ಕಠಿಣ ಪರಿಶ್ರಮದಿಂದ ದುಡಿಯುತ್ತಾರೆ. ಇದಕ್ಕಾಗಿ ಅವರು ಎಷ್ಟೋ ತ್ಯಾಗಗಳನ್ನೂ ಮಾಡುತ್ತಾರೆ ಎಂದು ಮೋದಿ ಡಿ.ಆರ್.ಡಿ.ಒ ಸಂಸ್ಥೆ ವಿಜ್ನಾನಿಗಳನ್ನು ಬಣ್ಣಿಸಿದ್ದಾರೆ.
ರಕ್ಷಣಾ ಕ್ಷೇತ್ರದ ವಿಷಯದಲ್ಲಿ ಪ್ರಪಂಚ ಅತ್ಯಂತ ವೇಗವಾಗಿ ಬದಲಾಗುತ್ತಿದ್ದು ತಂತ್ರಜ್ಞಾನ ಪ್ರಮುಖ ಚಲನಾ ಶಕ್ತಿಯಾಗಿದೆ ಈ ಹಿನ್ನೆಲೆಯಲ್ಲಿ ಡಿ.ಆರ್.ಡಿ.ಒ ಸಂಸ್ಥೆ ವಿಜ್ನಾನಿಗಳು ಅವಧಿಗೂ ಮುನ್ನವೇ ನೀಡಿರುವ ಯೋಜನೆಗಳನ್ನು ಪೂರ್ಣಗೊಳಿಸಬೇಕಾದ ಅಗತ್ಯವಿದೆ ಎಂದು ಮೋದಿ ತಿಳಿಸಿದ್ದಾರೆ.
ಡಿ.ಆರ್.ಡಿ.ಒ ವಿಜ್ನಾನಿಗಳಿಗೆ ಸೇನಾ ಸಿಬ್ಬಂದಿಯೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ದೊರೆಯುತ್ತಿದೆಯೇ? ರಕ್ಷಣಾ ಸಂಶೋಧನೆ ವಿಜ್ನಾನಿಗಳು ಸೇನಾ ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಕಾರ್ಯನಿರ್ವಹಿಸಿದರೆ ರಕ್ಷಣಾ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಸಾಧ್ಯ ಎಂದು ಮೋದಿ ಹೇಳಿದ್ದಾರೆ.
ಪ್ರಯೋಗಾಲಯದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ರಕ್ಷಣಾ ಇಲಾಖೆಗೆ ಸಂಬಂಧಿಸಿದ ವಿಶ್ವವಿದ್ಯಾನಿಲಯಗಳಲ್ಲಿ ವಿಜ್ನಾನಿಗಳು ತಮ್ಮನ್ನು ತೊಡಗಿಸಿಕೊಂಡರೆ ಅಲ್ಲಿನ ವಿದ್ಯಾರ್ಥಿಗಳಿಗೂ ಮಾರ್ಗದರ್ಶನ ದೊರೆಯುತ್ತದೆ. ಇದಕ್ಕಾಗಿ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದೆಂದು ಮೋದಿ ತಿಳಿಸಿದ್ದಾರೆ.
ಕಚ್ಚಾ ಪ್ರತಿಭೆಗಳನ್ನು ವಿಶ್ವವಿದ್ಯಾನಿಲಯಗಳು ಬಳಸಿಕೊಳ್ಳುವಂತಾಗಬೇಕು ರಕ್ಷಣಾ ಸಂಶೋಧನೆ ಕ್ಷೇತ್ರದಲ್ಲಿ ಜಾಣ್ಮೆಯಿಂದ ಹಾಗೂ ಶೀಘ್ರಗತಿಯಲ್ಲಿ ಕಾರ್ಯನಿರ್ವಹಿಸಿದರೆ ಪ್ರಪಂಚದ ಎಲ್ಲಾ ರಾಷ್ಟ್ರಗಳಿಗಿಂತಲೂ ಭಾರತ ಮುಂದಿರಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.