ಹರ್ಯಾಣ : 'ಸ್ವಾತಂತ್ರ್ಯ ದಿನಾಚರಣೆ' ದಿನ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿಲ್ಲ ಎಂಬ ಟೀಕೆಗೆ ಮೋದಿ ಉತ್ತರಿಸಿದ್ದು ಭ್ರಷ್ಟಾಚಾರ ಕ್ಯಾನ್ಸರ್ ಗಿಂತಲೂ ಮಾರಕ ರೋಗ ಎಂದಿದ್ದಾರೆ.
ಆ.19ರಂದು ಹರ್ಯಾಣಕ್ಕೆ ಭೇಟಿ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭ್ರಷ್ಟಾಚಾರವನ್ನು ಸಂಪೂರ್ಣ ನಿರ್ಮೂಲನೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ದಿನ ತಾವು ಮಾಡಿದ ಭಾಷಣದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿಲ್ಲ ಎಂಬುದು ಕೆಲವರ ಆರೋಪವಾಗಿತ್ತು. ಆದರೆ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದು, ಹೇಗೆ ಗಳಿಸಬೇಕು, ನನಗೇನು ಸಿಗಲಿದೆ ಎಂಬ ಆಲೋಚನೆಯೇ ನಮ್ಮನ್ನು ಹಾಳು ಮಾಡಿದೆ, ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿರ್ಮಾಣವಾದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿರುವುದಾಗಿ ಮೋದಿ ತಿಳಿಸಿದ್ದಾರೆ.
ಇದೇ ವೇಳೆ ಹರ್ಯಾಣದೊಂದಿಗಿನ ಒಡನಾಟವನ್ನು ನೆನೆದ ಮೋದಿ, ಇಲ್ಲಿನ ಜನತೆ ತಮಗೆ ಅತ್ಯಂತ ಪ್ರೀತಿ ತೋರಿದ್ದಾರೆ. ಇಲ್ಲಿನ ಜನತೆಗೆ ತಮ್ಮ ಮೇಲೆ ವಿಶೇಷ ಅಧಿಕಾರವಿದೆ ಎಂದು ಪ್ರಧಾನಿಯಾಗುವುದಕ್ಕೂ ಮುನ್ನ ಹೇಳಿದ್ದೆ, ಪ್ರಧಾನಿಯಾದ ಬಳಿಕವೂ ಇದನ್ನೇ ಹೇಳುತ್ತಿದ್ದೇನೆ ಎಂದಿದ್ದಾರೆ. ರಾಜ್ಯದ ಅಭಿವೃದ್ಧಿಗೆ ತಮ್ಮ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಮೋದಿ ಘೋಷಿಸಿದ್ದಾರೆ.
ಹರ್ಯಾಣ ರೈತರು ದೇಶದ ಜನತೆಯ ಹಸಿವನ್ನು ಹೋಗಲಾಡಿಸುತ್ತಿದ್ದರೂ ಹಣಕಾಸಿನ ಪ್ರತಿಫಲ ದೊರೆಯುತ್ತಿಲ್ಲ, ರೈತರಿಗೆ ಆರ್ಥಿಕ ನೆರವು ನೀಡಲು ಪ್ರಧಾನಮಂತ್ರಿ ಗ್ರಾಮೀಣ ಸಿಂಚಯಿ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೊಳಿಸುವುದಾಗಿ ಮೋದಿ ಭರವಸೆ ನೀಡಿದ್ದಾರೆ.
ಇದಕ್ಕೂ ಮುನ್ನ ಪ್ರಧಾನಿ ಮೋದಿ, ಕೈಥಲ್ ಹಿಸಾರ್ ರಾಜಸ್ಥಾನ ರಾಷ್ಟ್ರೀಯ ಹೆದ್ದಾರಿ(ಎನ್.ಹೆಚ್.65)ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಹರ್ಯಾಣ ಮುಖ್ಯಮಂತ್ರಿ ಭೂಪೇಂದರ್ ಸಿಂಗ್ ಹೂಡಾ ಇದ್ದರು.